ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಭೇಟಿ ಭಾಗವಾಗಿ ರಾಜ್ಯಕ್ಕೆ ಬರಲಿದ್ದು, ಭದ್ರತೆಗಾಗಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಂದರ್ಭ ಭದ್ರತಾ ಲೋಪ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಎಡಿಜಿಪಿ ಅಲೋಕ್ಕುಮಾರ್ ಹೇಳಿದರು.
ಅಮಿತ್ ಶಾ ಅವರು ಇಂದು (ಶನಿವಾರ) ಈಶ್ವರಮಂಗಲಕ್ಕೆ ಭೇಟಿ ನೀಡಿ, ಪುತ್ತೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳುವರು. ಅಲ್ಲಿ ಪಕ್ಷದ ಸಭೆಯಲ್ಲಿ ಭಾಗಯಾಗುವರು.
ಈಶ್ವರ ಮಂಗಲ ಹಾಗೂ ಪುತ್ತೂರಿನಲ್ಲಿ ಪಶ್ಚಿಮ ವಲಯ ಡಿಐಜಿ ಡಾ. ಚಂದ್ರಗುಪ್ತ ಅವರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಜತೆಗೆ 11 ಕೆಎಸ್ಆರ್ಪಿ ತುಕಡಿ, ಒಂದು ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನೀಯೋಜಿಸಲಾಗಿದೆ. ಜತೆಗೆ ಹೊರಜಿಲ್ಲೆಯ ಎಸ್ಪಿಗಳು, ಡಿವೈಎಸ್ಪಿಗಳು ಆಗಮಿಸಿದ್ದಾರೆ. ಅಗತ್ಯ ಇರುವಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ನಡೆಸಲಾಗಿದೆ.
ಮಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ನಡೆದಿದೆ. ಗೃಹ ಸಚಿವರ ಭೇಟಿ ಸಂದರ್ಭ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.