ಹೊಸದಿಗಂತ ವರದಿ ಅಂಕೋಲಾ
ತಾಲೂಕಿನ ಬೊಬ್ರುವಾಡದಲ್ಲಿ ಕಳೆದ 15 ದಿನಗಳಲ್ಲಿ 10 ಕ್ಕೂ ಅಧಿಕ ಜನರಿಗೆ ಕಚ್ಚಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದ ಮಂಗವೊಂದನ್ನು ಅರಣ್ಯ ಇಲಾಖೆ ಕೊನೆಗೂ ಇಂದು ಸೆರೆಹಿಡಿದಿದೆ.
ಈ ಮಂಗ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಂಡಕಂಡವರಿಗೆ ಕಚ್ಚುತ್ತಿತ್ತು. ಈ ವರೆಗೆ 10 ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು ಜನರಿ ಪ್ರಾಣ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಅದನ್ನು ಹಿಡಿಯುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 15 ದಿನಗಳಿಂದ ಚಿಕ್ಕ ಮಕ್ಕಳು,ವೃದ್ಧರು ಸೇರಿದಂತೆ ಹಲವರ ಮೇಲೆ ಕೋತಿ ದಾಳಿ ನಡೆಸಿದ್ದು ಕೆಲವರಿಗೆ ಗಂಭೀರಗಾಯಗಳಾಗಿದ್ದವು. ಸಿಕ್ಕ ಸಿಕ್ಕಲ್ಲಿ ಓಡಾಡುತ್ತಲೇ ಈ ಮಂಗ ಎದುರಾದವರ ಮೈ ಏರಿ ಹೋಗುತ್ತಿದ್ದುದರಿಂದ ಕಪಿಯ ದಾದಾಗಿರಿಗೆ ಜನ ಹೈರಾಣಾಗಿ ಹೋಗಿದ್ದರು. ಗುರುವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯಾಧಿಕಾರಿಗಳು ಮಂಗನನ್ನು ಅರವಳಿಕೆ ಔಷಧ ನೀಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ, ಪ್ರಜ್ಞೆ ತಪ್ಪಿದ ಮಂಗ ಚೇತರಿಸಿಕೊಂಡ ಬಳಿಕ ಕದ್ರಾ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ತಿಳಿಸಿದ್ದಾರೆ.15 ದಿನಗಳಿಂದ ಆತಂಕದಲ್ಲಿದ್ದ ಸ್ಥಳೀಯರ ಗೊಂದಲಕ್ಕೆ ತೆರೆ ಬಿದ್ದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ