ಹೊಸದಿಗಂತ ವರದಿ ರಾಯಚೂರು:
ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಗುರು ರಾಯರಿಗೆ ಅರ್ಪಿಸಲು ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾದ ಪವಿತ್ರ ಶ್ರೀವಾರಿ ವಸ್ತುವನ್ನು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಸ್ವೀಕರಿಸಿದರು.
ಗುರುವಾರ ತಿರುಮಲ ತಿರುಪತಿ ದೇವಸ್ಥಾನದ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರನ್ನೊಳಗೊಂಡ ಇತರ ಟಿಟಿಡಿಯ ಅಧಿಕಾರಿಗಳು ಮಂತ್ರಾಲಯಕ್ಕೆ ತಂದಿದ್ದ ಪವಿತ್ರ ಶ್ರೀವಾರಿ ವಸ್ತುವನ್ನು ಮಂತ್ರಾಲಯದ ರಾಯರ ಮಠದ ಅಧಿಕಾರಿಗಳು ಮತ್ತು ಪಂಡಿತರು ಸಕಲ ವಾದ್ಯಗಳ ಮೂಲಕ ಸಾಂಪ್ರದಾಯಿಕವಾಗಿ ಅವರನ್ನು ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿರು.

ಟಿಟಿಡಿ ಅಧಿಕಾರಿಗಳು ಶ್ರೀವಾರಿ ವಸ್ತçಗಳೊಂದಿಗೆ ಮದ್ವ ಕಾರಿಡಾರ್ ಮೂಲಕ ಶ್ರೀ ಮಠಕ್ಕೆ ತೆರಳಿ ಮೊದಲು ಶ್ರೀ ಮಂಚಲಮ್ಮ ದೇವಿಗೆ ವಸ್ತ್ರ ಅರ್ಪಿಸಿದರು. ನಂತರ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರು ಶ್ರೀವಾರಿ ವಸ್ತುವನ್ನು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿಯವರಿಗೆ ನೀಡಿದರು.
ಶ್ರೀವಾರಿ ವಸ್ತುವನ್ನು ಸುಬುಧೇಂದ್ರತೀರ್ಥ ಸ್ವಾಮೀಜಿಯವರು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಿದರು. ನಂತರ, ಟಿಟಿಡಿ ಅಧಿಕಾರಿಗಳು ಸುಬುಧೇಂದ್ರತೀರ್ಥ ಸ್ವಾಮೀಜಿಯವರಿಗೆ ಟಿಟಿಡಿ ಪ್ರಸಾದ ಮತ್ತು ಶೇಷವಸ್ತ್ರವನ್ನು ಅರ್ಪಿಸಿದರು. ನಂತರ ಸುಬುಧೇಂದ್ರತೀರ್ಥ ಸ್ವಾಮೀಜಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಹಾಗೂ ಇತರ ಟಿಟಿಡಿ ಅಧಿಕಾರಿಗಳಿಗೆ ಶೇಷವಸ್ತ್ರ, ಫಲ-ಮಂತ್ರಾಕ್ಷತೆ ಮತ್ತು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಅಧಿಕಾರಿಗಳಾದ ಎಸ್.ಕೆ. ಶ್ರೀನಿವಾಸರಾವ್, ವೇಂಕಟೇಶ ಜೋಷಿ ಸೇರಿದಂತೆ ಅನೇಕರಿದ್ದರು.



