September 17, 2026
Thursday, September 17, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ಮನಸ್ಸಿಗೆ ಬೇಕಾದಾಗ ಅಲ್ಲ, ದೇಹಕ್ಕೆ ಬೇಕಾದಾಗ ನೀರನ್ನು ಕುಡಿಯಬೇಕು: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೀರನ್ನು ದೇಹಕ್ಕೆ ಬೇಕಾದಾಗ ಕುಡಿಯಬೇಕು ಹೊರತು ಮನಸ್ಸಿಗೆ ಬೇಕಾದಾಗ ಕುಡಿಯುವುದಲ್ಲ. ಅನಗತ್ಯವಾಗಿ ಆಗಾಗ ನೀರನ್ನು ಕುಡಿಯುವ ಹವ್ಯಾಸ ಸರಿಯಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಗುರುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಕುರಿತಾಗಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ನೀರನ್ನು ಸಮರ್ಪಕವಾಗಿ ಸೇವಿಸಬೇಕು

ಜೀವನದಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಆದರೂ ಅನರ್ಥವೇ ಆಗುವುದು. ಹಾಗೆಯೇ ಹೆಚ್ಚಿನ ನೀರು ಹಾಗೂ ಕಡಿಮೆ ನೀರು ಸೇವನೆಯಿಂದ ಅನರ್ಥವೇ ಆಗುತ್ತದೆ. ನೀರನ್ನು ಹೆಚ್ಚಾಗಿ ಕುಡಿದಾಗ ಸರಿಯಾಗಿ ಸೇವಿಸಿದ ಆಹಾರವೂ ಸಮರ್ಪಕವಾಗಿ ಜೀರ್ಣವಾಗುವುದಿಲ್ಲ. ಹೆಚ್ಚಾಗಿ ನೀರು ಕುಡಿಯುವುದು ಎಲ್ಲಾ ರೀತಿಯ ಅನಾರೋಗ್ಯಕ್ಕೆ ಮೂಲವಾಗಬಹುದು. ಅಸಮರ್ಪಕವಾಗಿ ಸೇವಿಸಿದ ಔಷಧ, ಆಹಾರದಂತೆ ನೀರಿನಿಂದಲೂ ಅಡ್ಡಪರಿಣಾಮವಿದ್ದು, ನೀರನ್ನು ಸಮರ್ಪಕವಾಗಿ ಸೇವಿಸಬೇಕು ಎಂದು ಸ್ವಾಮೀಜಿ ಎಚ್ಚರಿಸಿದರು.

ದೇಹ ಕೇಳಿದಾಗ ಮಾತ್ರ ನೀರನ್ನು ಕುಡಿಯಬೇಕು

ಪ್ರಾಣ ಇರುವ ಎಲ್ಲರಿಗೂ ನೀರೇ ಪ್ರಾಣವಾಗಿದ್ದು, ದೇಹ ಕೇಳಿದಾಗ ಹಾಗೂ ಕೇಳಿದಷ್ಟು ಮಾತ್ರ ನೀರನ್ನು ಕುಡಿಯಬೇಕು ಎಂಬುದು ಆಯುರ್ವೇದದ ಆಚಾರ್ಯರ ಅಭಿಮತವಾಗಿದ್ದು, ನೀರನ್ನು ಇಷ್ಟೇ ಕುಡಿಯಬೇಕು ಎಂಬ ಪ್ರಮಾಣ ಆಯುರ್ವೇದದಲ್ಲಿ ಇಲ್ಲ. ಆಧುನಿಕ ವಿಜ್ಞಾನಕ್ಕೂ ಆಯುರ್ವೇದಕ್ಕೂ ನೀರಿನ ಸೇವನೆಯ ವಿಚಾರದಲ್ಲಿ ವ್ಯತ್ಯಾಸವಿದ್ದು, ವ್ಯಕ್ತಿಯ ತೂಕವನ್ನು ಆಧರಿಸಿ ನೀರಿನ ಪ್ರಮಾಣವನ್ನು ಆಧುನಿಕ ಪದ್ಧತಿ ಸೂಚಿಸುತ್ತದೆ. ಆದರೆ ಅದು ವ್ಯಕ್ತಿಯ ದೇಹ ಪ್ರಕೃತಿ ಹಾಗೂ ಜಠರಾಗ್ನಿಯ ಸಾಮರ್ಥ್ಯವನ್ನು ಪರಿಗಣಿಸುವುದಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಸರಿಯಾಗಿ ಸೇವಿಸಿದ ನೀರು ಅಮೃತ

ಊಟಕ್ಕಿಂತ ಮೊದಲು ನೀರನ್ನು ಸೇವಿಸಿದರೆ ಅದು ಅಜೀರ್ಣಕ್ಕೆ ಕಾರಣ ಹಾಗೂ ಊಟದ ಕೊನೆಯಲ್ಲಿ ಸೇವಿಸಿದರೆ ಅದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಊಟದ ಮಧ್ಯ ಮಧ್ಯದಲ್ಲಿ ಸೇವಿಸಿದ ನೀರು ದೇಹಕ್ಕೆ ಹಿತ ಎಂಬುದು ಆಯುರ್ವೇದ ಗ್ರಂಥಗಳ ಸಾರವಾಗಿದ್ದು, ನೀರನ್ನು ಗುಟುಕು ಗುಟುಕಾಗಿ ಘನಾಹಾರವನ್ನು ತಿನ್ನುವಂತೆ ನಿಧಾನವಾಗಿ ಕುಡಿಯಬೇಕು. ಪರಂಪರೆ ಹೇಳುವಂತೆ ನಿಂತು ಕುಡಿದ ನೀರು ರಾಜಸ ಗುಣವನ್ನು ಹೆಚ್ಚಿಸಿದರೆ, ಮಲಗಿ ಕುಡಿದರೆ ತಮೋ ಗುಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗೂ ಸರಿಯಾಗಿ ಕುಳಿತು ಕುಡಿದ ನೀರು ಸತ್ವ ಗುಣದ ವೃದ್ಧಿಗೆ ಕಾರಣ. ಹಾಗಾಗಿ ನೀರನ್ನು ಕುಳಿತೇ ಸೇವಿಸಬೇಕು. ಸರಿಯಾಗಿ ಸೇವಿಸಿದ ನೀರು ಅಮೃತ ಎಂದು ಸ್ವಾಮೀಜಿ ತಿಳಿಸಿದರು.

ನೀರನ್ನು ಯಾವಾಗ ಕುಡಿಯಬಾರದು?

ದೇಹಕ್ಕೆ ಹಸಿವಾದಾಗ, ಸಿಟ್ಟು ಬಂದಾಗ, ತುಂಬಾ ದಣಿದಾಗ, ತುಂಬಾ ಭಯಗೊಂಡಾಗ, ವ್ಯಾಯಾಮ ಮಾಡಿದ ತಕ್ಷಣ ನೀರನ್ನು ಸೇವಿಸಬಾರದು. ಮನಸ್ಸು ಪ್ರಸನ್ನವಾಗಿದ್ದಾಗ ನೀರನ್ನು ಕುಡಿಯಬೇಕು ಎಂದು ಶ್ರೀಗಳು ವಿವರಿಸಿದರು.

ಶ್ರೀರಾಮ ಕೆ.ಟಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಮೂರ್ತಿ ಹೆದ್ಲಿ ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !