August 29, 2026
Saturday, August 29, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸುಗಳೆಂಬ ಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಹನ ಚಲಿಸಲು ಇಂಧನ ಶಕ್ತಿ ಹಾಗೂ ಚಾಲನಾ ನಿಯಂತ್ರಣ ಬೇಕು. ಹಾಗೆಯೇ, ದೇಹವೆಂಬ ವಾಹನವು ಚಲಿಸಲು ಮನಸ್ಸು ಮತ್ತು ಓಜಸ್ಸುಗಳೆಂಬ ಶಕ್ತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶನಿವಾರ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಮನಸ್ಸು ನಮ್ಮ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಿತವಾಗಿದೆ ಮತ್ತು ದೇಹದ ಶಕ್ತಿ ದ್ರವವಾದ ಓಜಸ್ಸು ಕೂಡ ಅನ್ನದಿಂದಲೇ ಪೋಷಿಸಲ್ಪಟ್ಟಿದೆ. ಹೀಗೆ ದೇಹದ ನಿಯಂತ್ರಣಾ ಶಕ್ತಿ ಹಾಗೂ ಪೋಷಕ ಶಕ್ತಿಗಳೆರಡೂ ಆಹಾರವನ್ನೇ ಅವಲಂಭಿಸಿದೆ ಎಂದು ಆಹಾರದ ಮಹತ್ವವನ್ನು ಶ್ರೀಗಳು ವಿವರಿಸಿದರು.

ಉಪವಾಸದಿಂದ ದೇಹದ ಧಾತುಗಳು ಕ್ಷೀಣವಾಗುತ್ತದೆ ಎನ್ನಲಾಗುತ್ತದೆ. ಆದರೆ ಆತ್ಮಸಾಧನೆಯ ಕಾರಣದಿಂದ ಉಪವಾಸವಾದರೆ, ಓಜಸ್ಸು ದೇಹದಲ್ಲಿ ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಆತ್ಮಸಾಧನೆಯ ಜತೆಗೆ ಉಪವಾಸ ಮಾಡಿದಾಗ ಊಟವಿಲ್ಲದೆಯೂ ಜೀವಿಸಬಹುದು ಎಂದು ಸ್ವಾಮೀಜಿ ಹೇಳಿದರು.

ಓಜಸ್ಸೇ ಜೀವಿಯ ಅಳಿವು ಉಳಿವಿಗೆ ಕಾರಣ

ಹೃದಯ ಸ್ಥಾನದಲ್ಲಿರುವ ಓಜಸ್ಸೇ ಜೀವಿಯ ಅಳಿವು ಉಳಿವಿನ ಕಾರಣವಾಗಿದೆ. ಮದ್ಯಪಾನ, ಅಸಮರ್ಪಕ ಆಹಾರ, ಅತಿಯಾದ ವ್ಯಾಯಾಮ ಮುಂತಾದವುಗಳಿಂದ ಓಜಸ್ಸು ಕ್ಷೀಣಿಸುತ್ತದೆ. ಶುದ್ಧ ಗೋಘೃತ, ಗೋಕ್ಷೀರ, ಅರವತ್ತು ದಿನಗಳಲ್ಲಿ ಬೆಳೆಯುವ ಅಕ್ಕಿ, ಕುಲಾಂತರಿಯಲ್ಲದ ಗೋಧಿ, ಹೆಸರು ಕಾಳು ಮುಂತಾದವು ಓಜಸ್ಸಿನ ವೃದ್ಧಿಗೆ ಸಹಕಾರಿ ಎಂದು ಅವರು ತಿಳಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವೂ ಕ್ಷೀಣಿಸುತ್ತಿದೆ

ಜೀವನಕ್ಕೆ ಬೇಕಾದ ಎಲ್ಲವನ್ನೂ ಇಂದಿನ ವ್ಯವಸ್ಥೆ ಹುಡುಕಿ ಹುಡುಕಿ ನಾಶ ಮಾಡುವ ಕಾರ್ಯ ಮಾಡುತ್ತಿದ್ದು, ಒಂದೆಡೆ ಗೋಸಂತತಿ ಕ್ಷೀಣಿಸುತ್ತಿದ್ದರೆ, ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತ ಹಾಗೂ ಆಹಾರ ಬೆಳೆಗಳ ವಿನಾಶ ನಡೆಯುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವಿನಾಶ್ ಭಟ್, ಕೇಂದ್ರ ಸಾಂಬಾರು ಮಂಡಳಿಯ ಪ್ರಸನ್ನ ಕೆರೆಕೈ, ಧಾರವಾಡ ಜಿಲ್ಲಾ ರೋಟರಿ ಗವರ್ನರ್ ಗಣೇಶ್ ಭಟ್ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.

ಮಂಗಳೂರು ಹವ್ಯಕ ಮಂಡಲದ ಬಾಯಾರು, ಕೇಪು, ಕನ್ಯಾನ, ಮುಡಿಪು, ಕುಂದಾಪುರ, ಕೋಳ್ಯೂರು ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು.

ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ರಮೇಶ ಭಟ್ ಸರವು, ಉಮೇಶ ಭಟ್ ಕೊಣಮ್ಮೆ, ಮಲ್ಲಿಕಾ ಭಟ್, ಸುಮಾ ರಮೇಶ್, ಕೃಷ್ಣಪ್ರಮೋದ, ದಿನಪ್ರಧಾನರಾದ ಶ್ರೀಕಾಂತ ಕಾಳಮಂಜಿ ದಂಪತಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !