ಹೊಸದಿಗಂತ ವರದಿ ಬಳ್ಳಾರಿ:
ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದೆ, ಇಲ್ಲಿವರೆಗೆ ಉತ್ತರ ಬಂದಿಲ್ಲ, ನಿಯಮದಂತೆ 5 ನೋಟೀಸ್ ಜಾರಿ ಬಳಿಕ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರೂ ಯಾರೇ ಇರಲಿ ಮುಲಾಜಿಲ್ಲದೇ ಪಕ್ಷ ಕಠಿಣ ಕ್ರಮಕೈಗೊಳ್ಳಲಿದೆ. ಮಹಾನಗರ ಪಾಲಿಕೆ ಸದಸ್ಯರಾದ ಕಲ್ಪನಾ ವೆಂಕಟರಾಮ ರೆಡ್ಡಿ, ಕೋನಂಕಿ ತಿಲಕ್ ಕುಮಾರ್, ಕೆ.ಎಸ್. ಅಶೋಕ್ ಕುಮಾರ್ ಮೂವರು ಬಿಜೆಪಿಯಿಂದ ಗೆದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಆರ್ ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬಿಜೆಪಿ ವಿರುದ್ಧ ಕೆಲಸ ಮಾಡಿದರು, ಇದನ್ನು ವರೀಷ್ಠರು ಗಮನಿಸಿದ್ದು, ಮೂವರು ನೋಟೀಸ್ ಜಾರಿಗೊಳಿಸಿದ್ದಾರೆ, ಇಲ್ಲಿವರೆಗೆ ಉತ್ತರ ಬಂದಿಲ್ಲ, ಕಂಡಿತ ಅವರ ಸದಸ್ಯತ್ವಕ್ಕೆ ಆಪತ್ತು ಎದುರಾಗಲಿದೆ, ಪಕ್ಷ ಎಲ್ಲವೂ ಗಮನಿಸುತ್ತಿದ್ದು, ಎಷ್ಟೇ ಪ್ರಭಾವಿಗಳಿರಲಿ, ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇಲ್ಲಿವರೆಗೆ ಕೋಟ್ಯಾಂತರ ರೂ. ಅನುದಾನವನ್ನು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿದೆ. ನಮ್ಮದು ಅಭಿವೃದ್ಧಿ ಮಂತ್ರ, ಕಳೆದ ಚುನಾವಣೆಯಲ್ಲಿ ನಮ್ಮ ಅಭಿವೃದ್ಧಿ ಸೋತಿತು, ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿ ಗೆದ್ದಿದೆ. ಜನರ ಒಲುವು ಬಿಜೆಪಿ ಕಡೆಗೆ ಇದ್ದು, ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿಗಳಿಗೆ ಮತದಾರರು ಒಳಗಾಗಿ ಕಮಲವನ್ನು ತಿರಸ್ಕರಿಸಿ, ಕಾಂಗ್ರೆಸ್ ಬೆಂಬಲಿಸಿದ್ದಾರೆ. ಮತ್ತೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಜಿಲ್ಲೆಯಲ್ಲಿ ಕಮಲವನ್ನು ಅರಳಿಸುತ್ತೇವೆ, ಇದರಲ್ಲಿಅನುಮಾನವೇ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಎಮ್ಮೆಲ್ಸಿ ವೈ.ಎಂ.ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲ್ ನಾಯ್ಡು, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ವಕ್ತಾರ ಡಾ.ಬಿ.ಕೆ.ಸುಂದರ್, ಜಿಲ್ಲಾ ಉಪಾಧ್ಯಕ್ಷೆ ಡಾ.ಅರುಣಾ ಕಾಮಿನೇನಿ ಇತರರಿದ್ದರು.