ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ರಾಜ್ಕೋಟ್ ಜಿಲ್ಲೆಯ ಧೋರಾಜಿ ಪಟ್ಟಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಈ ವೇಳೆ ಮೋದಿ, ನರ್ಮದಾ ಅಣೆಕಟ್ಟು ಯೋಜನೆಯನ್ನು 3 ದಶಕಗಳವರೆಗೆ ಸ್ಥಗಿತಗೊಳಸಿದ ಮಹಿಳೆಯೊಂದಿಗೆ ನೀವು ಯಾತ್ರೆಯನ್ನು ಮಾಡುತ್ತಿದ್ದೀರಾ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಯಲ್ಲಿ ನರ್ಮದಾ ಬಚಾವೋ ಆಂದೊಲನದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರೊಂದಿಗೆ ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದರು.
ಇದನ್ನು ಟೀಕಿಸಿದ ಪ್ರಧಾನಿ ಮೋದಿ, ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ವಿಳಂಬವಾಯಿತು. ಏಕೆಂದರೆ ಅನೇಕರು ಅದನ್ನು ಸ್ಥಗಿತಗೊಳಿಸಲು ಯತ್ನಿಸಿದರು ಎಂದು ಹೇಳಿದರು.
ನರ್ಮದಾ ವಿರೋಧಿ ಹೋರಾಟಗಾರ್ತಿ ಮಹಿಳೆಯೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ಹೇಗೆ ಪಾದಯಾತ್ರೆ ನಡೆಸಲು ಸಾಧ್ಯ? ಇವರು ಕಾನೂನು ಅಡೆತಡೆಗಳನ್ನು ಸೃಷ್ಟಿಸಿ 3 ದಶಕಗಳಿಂದ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಗುಜರಾತ್ನ ಬಿಜೆಪಿ ಸರ್ಕಾರ ಚೆಕ್ಡ್ಯಾಮ್ಗಳ ನಿರ್ಮಾಣ, ಹೊಸ ಬಾವಿಗಳು ಮತ್ತು ಕೆರೆಗಳನ್ನು ಕೊರೆಸುವುದು ಮತ್ತು ಪೈಪ್ಲೈನ್ಗಳ ಮೂಲಕ ನೀರು ಒದಗಿಸುವಂತಹ ವಿವಿಧ ಯೋಜನೆಗಳ ಮೂಲಕ ನೀರಿನ ಕೊರತೆಯನ್ನು ಪರಿಹರಿಸಲು 20 ವರ್ಷಗಳ ಕಾಲ ಶ್ರಮಿಸಿದೆ. ಇದೀಗ ಇಡೀ ಕಚ್ ಹಾಗೂ ಕಥಿಯವಾಡ ಪ್ರದೇಶ ಈ ಪೈಪ್ಲೈನ್ಗಳ ಜಾಲದ ಮೂಲಕ ನೀರನ್ನು ಪಡೆಯುತ್ತಿವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ತರುವಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.