ಹೊಸದಿಗಂತ ವರದಿ ವಿಜಯಪುರ:
ಒಂಟಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕಾಂತ ಹರಿಜನ, ಭೀಮು ಪಡಕೋಟಿ, ಆಕಾಶ ಕಲ್ಲವ್ವಗೋಳ ಬಂಧಿತ ಆರೋಪಿಗಳು ಎಂದರು.
ಬಂಧಿತ ಆರೋಪಿಗಳಿಂದ 12.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 36 ಸಾವಿರ ಮೌಲ್ಯದ 600 ಗ್ರಾಂ ಬೆಳ್ಳಿ, 5.50 ಲಕ್ಷ ಮೌಲ್ಯದ ಒಂದು ಕಾರು, ಕೃತ್ಯಕ್ಕೆ ಬಳಿಸಿದ ಕಬ್ಬಿಣದ ರಾಡ್, ಸುತ್ತಿಗೆ ಸೇರಿದಂತೆ 18.36 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಈ ಆರೋಪಿಗಳು ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಸೋಮನಾಥ ರುದ್ರಗೌಡ ಬಗಲಿ ಎಂಬವರ ಮನೆಯಲ್ಲಿ, 9 ತೊಲೆ 3 ಗ್ರಾಂ ಚಿನ್ನ ಕದ್ದು ಮಾರಾಟಕ್ಕೆ ಹೋಗುವಾಗ ಖಚಿತ ಮಾಹಿತಿ ಆಧರಿಸಿ ದಾಳಿಗೈದು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರತ್ಯೇಕ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೈಕ್ಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ನಜೀರ್ ಸಾಹೇಬಲಾಲ್ ಜಾತಗಾರ (26) ಹಾಗೂ ಅಭಿನಾಶ ಮದಾರಸಾಬ್ ವಜ್ಜಣ್ಣವರ (20) ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳಿಂದ 3.60 ಲಕ್ಷ ಮೌಲ್ಯದ 7 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.