ಹೊಸದಿಗಂತ ವರದಿ ಕುಶಾಲನಗರ:
ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ಹಾಗೂ ಕೊಡಗು ಜಿಲ್ಲಾಡಳಿತ ಹಮ್ಮಿಕೊಂಡಿರುವ ಉದ್ಯೋಗ ಮೇಳದ ಪ್ರಯೋಜನವನ್ನು ನಿರುದ್ಯೋಗಿ ವಿದ್ಯಾವಂತ ತರುಣ ತರುಣಿಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು.
ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಯೋಗಿ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತದ ವತಿಯಿಂದ ಕುಶಾಲನಗರದ ಸರ್ಕಾರಿ ಪಾಲಿಟಿಕ್ನಿಕ್ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮವಾದ ವ್ಯಾಸಂಗದ ಜೊತೆಗೆ ಅತ್ಯುತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು.
ವಿದ್ಯಾಭ್ಯಾಸ ಪೂರೈಸಿದ ಬಳಿಕ ಪೋಷಕರಿಗೆ ಹೊರೆಯಾಗದಂತೆ ಪ್ರತಿಯೊಬ್ಬರೂ ಒಂದೊಂದು ಉದ್ಯೋಗವನ್ನು ಅಲಂಕರಿಸಬೇಕು ಎಂಬ ಮಹದುದ್ದೇಶದಿಂದ ಆಯೋಜಿಸುವ ಇಂತಹ ಮೇಳಗಳು ಉಪಕಾರಿ ಎಂದು ಶಾಸಕರು ಹೇಳಿದರು.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, ಸರ್ಕಾರ ಹಮ್ಮಿಕೊಳ್ಳುವ ಉದ್ಯೋಗ ಮೇಳಗಳಲ್ಲಿ ಉದ್ಯೋಗ ಕಂಡುಕೊಳ್ಳುವ ಮೂಲಕ ಇತರರಿಗೆ ಉದ್ಯೋಗಗಳನ್ನು ನೀಡುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗಬೇಕೆಂದು ಯುವ ಜನಾಂಗಕ್ಕೆ ಜಿಲ್ಲಾಧಿಕಾರಿಗಳು ಕರೆಕೊಟ್ಟರು.