ಹೊಸದಿಗಂತ ವರದಿ ಮೈಸೂರು:
ಅರಮನೆ ನಗರಿ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಜೆಪಿ ಅಭ್ಯರ್ಥಿ ಗಳ ಪರವಾಗಿ ಏಪ್ರಿಲ್ 30 ರಂದು ಬೃಹತ್ ಚುನಾವಣಾ ಪ್ರಚಾರ ರ್ಯಾಲಿಯನ್ನು ನಡೆಸಲಿದ್ದಾರೆ. ಶುಕ್ರವಾರ ಮೈಸೂರಿನಲ್ಲಿನ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ದೆಹಲಿಯಿಂದ ನೇರವಾಗಿ ಮೈಸೂರಿನ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಲಿರುವ ನರೇಂದ್ರ ಮೋದಿಯವರು ಅವರನ್ನು ಮೈಸೂರಿನ ಪಾರಂಪರಿಕ ವಸ್ತು ಗಳಾದ ವಿಳ್ಯದೆಲೆ, ಶ್ರೀ ಗಂಧದ ಕಡ್ಡಿ, ಮೈಸೂರು ಸಿಲ್ಕ್ ಬಟ್ಟೆ ಮುಂತಾದವುಗಳನ್ನು ನೀಡಿ ಸ್ವಾಗತಿಸಲಾಗುವುದು ಎಂದರು.
ನಾದಸ್ವರ ಸೇರಿದಂತೆ ಜಾನಪದ ಕಲಾತಂಡಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಭರ್ಜರಿ ಸ್ವಾಗತವನ್ನು ನೀಡಲಿದ್ದಾರೆ. ಸಂಜೆ 5.30 ಕ್ಕೆ ತರೆದ ವಾಹನದಲ್ಲಿ ರೋಡ್ ಶೋ ರ್ಯಾಲಿಯನ್ನು ಪ್ರಾರಂಭಿಸಲಿದ್ದಾರೆ. ಅವರನ್ನು ಸುಮಾರು 30ಕ್ಕೂ ಹೆಚ್ಚು ಕಲಾತಂಡಗಳು, ಮೈಸೂರಿನ ಪಾರಂಪರಿಕ ವೇಷಭೂಷಗಳನ್ನು ಧರಿಸಿದ 30ಸಾವಿರಕ್ಕೂ ಹೆಚ್ಚು ಜನರು ದಾರಿಯ ಉದ್ದಕ್ಕೂ ಸ್ವಾಗತಿಸಲಿದ್ದಾರೆ. ರ್ಯಾಲಿ ಸಂಸ್ಕೃತ ಪಾಠಶಾಲೆ ನಗರಪಾಲಿಕೆ, ಸಿಟಿ ಬಸ್ ಸ್ಟ್ಯಾಂಡ್, ಕೆ ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂ ಸಿ, ಮಿಲಿಯನ್ ಸರ್ಕಲ್ ತನಕ ಸಾಗಲಿದ್ದು, ಸುಮಾರು ಒಂದ ಲಕ್ಷಕ್ಕೂ ಹೆಚ್ಚು ಮಂದಿ ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಮೋದಿಯವರು ಹಾದುಹೋಗುವ ರಸ್ತೆ ಇಕ್ಕಲೆಗಳಲ್ಲಿ ಪಾರಂಪರಿಕ ಉಡುಗೆ ತೊಟ್ಟ ಜನರು ಸ್ವಾಗತಿಸಲಿದ್ದಾರೆ. ಅಲ್ಲದೆ ರಸ್ತೆ ಇಕ್ಕೆಲಗಳಲ್ಲಿ ಪ್ರಧಾನ ಪ್ರಧಾನಿ ನರೇಂದ್ರ ಮೋದಿಯವರು ನಡೆದು ಬಂದ ಹಾದಿ, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ನೀಡಿದ ಕೊಡುಗೆಗಳು, ಲಾಲ್ ಚೌಕ್ ನಲ್ಲಿ ಬಾಲಕನಾಗಿದ್ದಾಗ ರಾಷ್ಟ್ರ ಧ್ವಜ ಹಾರಿಸಿದ ಚಿತ್ರದಿಂದ ಹಿಡಿದು, ಜಿ.20 ವಿಶ್ವದ ನಾಯಕನಾಗಿ ಬೆಳೆದ ಬಗೆ, ಮಾಡಿದ ಸಾಧನೆಗಳು ಮುಂತಾದವುಗಳ ಭಿತ್ತಿ ಚಿತ್ರಗಳನ್ನು ಹಾಕಲಾಗುವುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹಿರಿಯ ನಾಗರಿಕರು ನೋಡಲು ಅನುಕೂಲವಾಗುವಂತೆ ಐದು ಸ್ಥಳಗಳಲ್ಲಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು ನಾಲ್ಕು ಕಿಲೋಮೀಟರ್ ರ್ಯಾಲಿಯನ್ನು ನಡೆಸಲಿರುವ ಮೋದಿಯವರು, ಮಿಲಿಯಮ್ ಸರ್ಕಲ್ ನಲ್ಲಿ ರ್ಯಾಲಿಯನ್ನು ಮುಕ್ತಾಯಗೊಳಿಸಲಿದ್ದು, ಅಲ್ಲಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.