ಹೊಸದಿಗಂತ ವರದಿ ಕುಶಾಲನಗರ:
ರಾಜ್ಯ ಸರಕಾರ ನೂತನವಾಗಿ ಘೋಷಿಸಿರುವ ಕೊಡಗು ವಿಶ್ವವಿದ್ಯಾನಿಲಯದ ಚೊಚ್ಚಲ ಕುಲಪತಿಗಳಾಗಿ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಡಾ. ಅಶೋಕ ಸಂಗಪ್ಪ ಆಲೂರು ಅವರು ಅಧಿಕಾರ ಸ್ವೀಕರಿಸಿದರು.
ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಗಳನ್ನಾಗಿ ಡಾ. ಅಶೋಕ ಸಂಗಪ್ಪ ಆಲೂರು ಅವರನ್ನು ಸರಕಾರ ನೇಮಕ ಮಾಡಿದ್ದು, ಶನಿವಾರ ಕೇಂದ್ರಕ್ಕೆ ಆಗಮಿಸಿದ ಅವರನ್ನು ವಿವಿಯ ಪ್ರಭಾರ ನಿರ್ದೇಶಕ ಪ್ರೊ. ಕೆ. ಕೆ.ಧರ್ಮಪ್ಪ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು.
ಈ ಸಂದರ್ಭ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್, ಪ್ರೊ. ಎಂ ಜಯಶಂಕರ್, ಜೀವರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ, ಕೆ.ಎಸ್. ಚಂದ್ರಶೇಖರಯ್ಯ, ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಜಿ. ಶ್ಯಾಮಸುಂದರ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.