ಹೊಸಗಂತ ಡಿಜಿಟಲ್ ಡೆಸ್ಕ್
ಏಷ್ಯಾಕಪ್ ಗೆ ಯುಎಇ ನೆಲದಲ್ಲಿ ಭರ್ಜರಿ ಚಾಲನೆ ಸಿಕ್ಕಿದೆ. ಇಂಡೋ- ಪಾಕ್ ಅಭಿಮಾನಿಗಳ ಪಾಲಿಗೆ ಇಂದು ಬ್ಲಾಕ್ ಬಸ್ಟರ್ ಭಾನುವಾರ. ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳು ಎಂದೇ ಪರಿಗಣಿಸಲ್ಪಟ್ಟ ಈ ಎರಡು ತಂಡಗಳು ವರ್ಷದ ಬಳಿಕ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕದನವನ್ನು ಕಣುಂಬಿಕೊಳ್ಳಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಈ ನಡುವೆ ಮಹತ್ವದ ವಿಚಾರವೊಂದು ತಿಳಿದುಬಂದಿದ್ದು, ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರರು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಕಣಕ್ಕೆ ಇಳಿಯಲಿದ್ದಾರೆ.
ಪಾಕ್ ತಂಡದ ನಿರ್ಧಾರದ ಹಿಂದೆ ಒಂದು ಉತ್ತಮವಾದ ಉದ್ದೇಶವಿದೆ. ದೇಶದಲ್ಲಿ ಪ್ರವಾಹದಿಂದ ನಲುಗಿಹೋಗಿರುವ ಜನರಿಗೆ ಬೆಂಬಲ ಸೂಚಿಸಲು ಪಾಕ್ ಇಂದಿನ ಪಂದ್ಯದಲ್ಲಿ ಜೆರ್ಸಿ ತೋಳಿಗೆ ಕಪ್ಪು ಬ್ಯಾಂಡ್ ಗಳನ್ನು ಧರಿಸಲು ನಿರ್ಧರಿಸಿದೆ.
“ದೇಶಾದ್ಯಂತ ಪ್ರವಾಹದಿಂದ ಪೀಡಿತರಾದವರಿಗೆ ತಮ್ಮ ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ಪಾಕಿಸ್ತಾನ ಕ್ರಿಕೆಟ್ ತಂಡವು ಇಂದು ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಕಪ್ಪು ತೋಳಿನ ಬ್ಯಾಂಡ್ಗಳನ್ನು ಧರಿಸಲಿದೆ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆಯನ್ನು ನೀಡಿದೆ.
ಮಾನ್ಸೂನ್ ಪ್ರವಾಹವನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪ್ರವಾಹ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಮುಂಗಾರು ಮಳೆಯ ಪರಿಣಾಮವಾಗಿ ಈ ವರ್ಷ 900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆ ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್ಡಿಎಂಎ) ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ