ಹೊಸದಿಗಂತ ಡಿಜಿಟಲ್ ಡೆಸ್ಕ್
ಸುಮಾರು 400 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಬಿಗಿ ಭದ್ರತೆಯ ನಡುವೆ ಅಸ್ಸಾಂ ಸರ್ಕಾರವು ನಾಗಾಂವ್ನಲ್ಲಿ ಬೃಹತ್ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ವೈಷ್ಣವ ಸಂತ ಶ್ರೀ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್ನ ಬಟದ್ರಾವ ಸಮೀಪದ ನಾಲ್ಕು ಗ್ರಾಮಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮುಂಜಾನೆ 600 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ತೆರವು ಕಾರ್ಯಾಚರಣೆ ಪ್ರಾರಂಭವಾಯಿತು. ಇದುವರೆಗೆ ಕಾರ್ಯಾಚರಣೆ ಶಾಂತಿಯುತವಾಗಿದೆ ಎಂದು ನಾಗಾವ್ನ ಪೊಲೀಸ್ ಅಧೀಕ್ಷಕ ಲೀನಾ ಡೋಲಿ ಹೇಳಿದ್ದಾರೆ.
ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ಅಕ್ಟೋಬರ್ನಲ್ಲಿ ಸುಮಾರು 1,000 ಕುಟುಂಬಗಳಿಗೆ ನೋಟಿಸ್ ಕಳುಹಿಸಲಾಗಿದ್ದು, ಭೂಮಿಯನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ, ಅಸ್ಸಾಂನ ದರ್ರಾಂಗ್ನಲ್ಲಿ ಇದೇ ರೀತಿಯ ತೆರವು ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿತ್ತು, ಇದರ ಪರಿಣಾಮವಾಗಿ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ತಿಂಗಳ ಆರಂಭದಲ್ಲಿ, ಅಸ್ಸಾಂನ 303 ವೈಷ್ಣವ ಮಠಗಳಿಗೆ ಸೇರಿದ 1,800 ಹೆಕ್ಟೇರ್ಗೂ ಹೆಚ್ಚು ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಲ್ಲಿಸಲಾಗಿತ್ತು.
ಕಳೆದ ವರ್ಷ ಮೇನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರಿ ಭೂಮಿ ಅತಿಕ್ರಮಣ ಮಾಡಿದ್ದ ಸುಮಾರು 4,449 ಕುಟುಂಬಗಳನ್ನು ಹೊರಹಾಕಲಾಗಿದೆ ಎಂದು ಸೆಪ್ಟೆಂಬರ್ 12 ರಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ವಿಧಾನಸಭೆಗೆ ತಿಳಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ