ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬೆಂಗಳೂರಿನಲ್ಲಿ ನಾಲ್ಕು ಮತ ಎಣಿಕೆ ಕೇಂದ್ರಗಳಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಫಲಿತಾಂಶದ ದಿನ ನಗರದ ಎಣಿಕಾ ಕೇಂದ್ರಗಳಿಗೆ 1,500 ಪೊಲೀಸರು ಭದ್ರತೆ ಒದಗಿಸಲಿದ್ದಾರೆ.
ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜು, ವಸಂತ ನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಕಾಲೇಜು ಹಾಗೂ ತಿಲಕ್ ನಗರದ ಎಸ್ಎಸ್ಎಂಆರ್ವಿ ಕಾಲೇಜುಗಳಲ್ಲಿ ಎಣಿಕಾ ಕೇಂದ್ರಗಳಿದ್ದು, ಬಿಗಿ ಭದ್ರತೆ ನೀಡಲಾಗುತ್ತಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿಗೆ 2 ಡಿಸಿಪಿ, 4 ಎಸಿಪಿ, 20 ಇನ್ಸ್ಪೆಕ್ಟರ್, 72 ಪಿಎಸ್ಐ ಸೇರಿ 506 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಸವನಗುಡಿಯ ಬಿಎಂಎಸ್ ಕಾಲೇಜಿಗೆ 2 ಡಿಸಿಪಿ, 4 ಎಸಿಪಿ, 18 ಇನ್ಸ್ಪೆಕ್ಟರ್, 40 ಪಿಎಸ್ಐ ಸೇರಿ 275 ಸಿಬ್ಬಂದಿ, ತಿಲಕ್ ನಗರದ ಎಸ್ಎಸ್ಎಂಆರ್ವಿ ಕಾಲೇಜಿಗೆ ಇಬ್ಬರು ಡಿಸಿಪಿ, 5 ಎಸಿಪಿ, 10 ಇನ್ಸ್ಪೆಕ್ಟರ್, 14 ಪಿಎಸ್ಐ ಸೇರಿ 399 ಪೊಲೀಸ್ ಸಿಬ್ಬಂದಿ ಹಾಗೂ ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿಗೆ ಇಬ್ಬರು ಡಿಸಿಪಿ, 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್ಐ ಸೇರಿ 214 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಾಳೆ ಬೆಳಿಗ್ಗೆ 5 ಗಂಟೆಗೆ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮತ ಎಣಿಕೆ ಕೇಂದ್ರದ ಬಳಿ ಹಾಜರಿರಲು ಸೂಚಿಸಲಾಗಿದೆ.