ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸ್ವಾತಂತ್ರ್ಯ ಬರುವಾಗ 35 ಕೋಟಿ ಇದ್ದ ಜನಸಂಖ್ಯೆ ಈಗ 130 ಕೋಟಿಗೆ ವಿಸ್ತರಿಸಿದೆ ಎಂಬ ಅಂಶವನ್ನು ನಾವು ಅಲ್ಲಲ್ಲಿ ಕೇಳಿರುತ್ತೇವೆ. ಇದಕ್ಕೆ ಸರಿಯಾಗಿ ಆಹಾರ ಉತ್ಪಾದನೆಯನ್ನೂ ಭಾರತ ಹೆಚ್ಚಿಸಿಕೊಂಡಿದೆ ಎಂಬುದು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ನಾವು ಹೆಮ್ಮೆಪಡಬೇಕಾದ ವಿಷಯಗಳಲ್ಲೊಂದು.
ಸ್ವಾತಂತ್ರ್ಯದ ನಂತರ ಎರಡು ದಶಕಗಳಷ್ಟು ಕಾಲ ಭಾರತವು ಆಹಾರಕ್ಕೆ ತತ್ವಾರ ಪಡುತ್ತಲೇ ಇತ್ತು. 1960ರ ವೇಳೆಗೆ ಆದ ಹಸಿರು ಕ್ರಾಂತಿ ಮುಖ್ಯವಾಗಿ ಗೋದಿ-ಅಕ್ಕಿಗಳನ್ನು ಭಾರತದ ಬಾಯಿಗಳಿಗೆ ಖಾತ್ರಿಯಾಗಿಸಿತು. ಹಸಿರು ಕ್ರಾಂತಿ ಬಂದು ನಮ್ಮ ದೇಸಿ ತಳಿಗಳು ಮತ್ತು ಬೇಳೆಕಾಳುಗಳು ಮಾಯವಾದವು ಎಂಬೆಲ್ಲ ಟೀಕೆಗಳು ಇವೆ. ಆದರೆ, ಎಲ್ಲರ ಹೊಟ್ಟೆ ತುಂಬಿಸಬೇಕಾದ ಪ್ರಾಥಮಿಕ ಕರ್ತವ್ಯವನ್ನು ಹಸಿರು ಕ್ರಾಂತಿ ನೆರವೇರಿಸಿತು ಎಂಬುದರಲ್ಲಿ ಸಂಶಯವಿಲ್ಲ.
ಅಂಕಿಸಂಖ್ಯೆ ಗಮನಿಸುವುದಾದರೆ, 1950ರಲ್ಲಿ 52.82 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಬೆಳೆದಿದ್ದ ಭಾರತ, 2021-22ರಲ್ಲಿ 314.51 ಮಿಲಿಯನ್ ಟನ್ ಆಹಾರಧಾನ್ಯ ಬೆಳೆದಿದೆ.
ಈ ಸಾಧನೆಯಿಂದಲೇ ಇವತ್ತು ಕೋವಿಡ್ ರೀತಿಯ ಸ್ಥಿತಿಯಲ್ಲೂ ಪಡಿತರದಲ್ಲಿ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವುದು ಸಾಧ್ಯವಾಗಿದೆ.