ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಾಪಟ್ಟೆ ದುಡ್ಡು ಕೊಟ್ಟು ರೈಲಿನಲ್ಲಿ ಪ್ರಯಾಣಿಸುವಾಗ ಕೊಳಕು ಬೆಡ್ಶೀಟ್, ಗಬ್ಬುನಾಥ ಬೀರುವ ದಿಂಬು, ಎರಡು ನಿಮಿಷವೂ ಕೂರಲಾಗದಷ್ಟು ಗಲೀಜಾದ ಸೀಟುಗಳಿದ್ರೆ ಪ್ರಯಾಣಿಕರಾದರೂ ಏನು ಮಾಡ್ತಾರೆ? ವಿಧಿಯಿಲ್ಲದೆ ಪ್ರಯಾಣಿಗಳು ತುರ್ತು ಸರಪಳಿಯನ್ನು ಎಳೆದಿದ್ದಾರೆ.
ಈ ಸನ್ನಿವೇಶ ಎದುರಾಗಿದ್ದು ಚೆನ್ನೈ ಸೆಂಟ್ರಲ್- ಏಕ್ತಾ ನಗರ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿ. ಏಕ್ತಾ ನಗರಕ್ಕೆ ಹೋಗುವ ರೈಲು ರೇನಿಗುಂಟದಲ್ಲಿ ಮೊದಲ ಸ್ಟಾಪ್ ಮಾಡಿತ್ತು. ನಂತರ ಅರಕ್ಕೋಣಂನಲ್ಲಿ ಎರಡನೇ ಸ್ಟಾಪ್ ನೀಡಿತ್ತು. ಎಸಿ ಕೋಚ್ನಲ್ಲಿದ್ದ ೨೦ಕ್ಕೂ ಹೆಚ್ಚು ಪ್ರಯಾಣಿಕರು ಪ್ಲಾಟ್ಫಾರ್ಮ್ಗೆ ಬಂದು ನಿಂತಿದ್ದಾರೆ.
ರೈಲ್ವೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಬೆಡ್ ಹಾಗೂ ದಿಂಬಿನ ಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ಜಿಆರ್ಪಿ ಮತ್ತು ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಮಾಧಾನ ಪಡಿಸಿ ರೈಲು ಹತ್ತಿಸಿದ್ದಾರೆ.
ಎಸಿ ಕೋಚ್ ತುಂಬಾ ತಣ್ಣಗಿದ, ಬೆಡ್ರೋಲ್ನಿಂದ ದುರ್ವಾಸನೆ ಬರುತ್ತಿದೆ. ವೃದ್ಧರು ಮಕ್ಕಳು ಸೀಟ್ನಲ್ಲಿ ಕೂರುವುದಕ್ಕೂ ಹಿಂಸೆ ಪಟ್ಟುಕೊಂಡಿದ್ದಾರೆ. ಈಗಾಗಲೇ ದೂರು ಸಲ್ಲಿಸಿದ್ದರೂ ಏನೂ ಬದಲಾವಣೆ ಆಗಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಇಷ್ಟಾದರೂ ಏನೂ ಆಗದಿದ್ದಾಗ ಪ್ರಯಾಣಿಕರು ಅರಕ್ಕೋಣಂ ಜಂಕ್ಷನ್ನಲ್ಲಿ ತುರ್ತು ಸರಪಳಿ ಎಳೆದಿದ್ದು, ರೈಲು 20 ನಿಮಿಷ ನಿಂತಿತ್ತು. ಈ ಬಗ್ಗೆ ಕೂಲಂಕಷವಾಗಿ ವಿಚಾರಿಸುತ್ತೇವೆ. ಪರಿಶೀಲನೆ ನಡೆಸುತ್ತೇವೆ ಎಂದು ರೈಲ್ವೆ ಅಧಿಕಾರಿ ಹೇಳಿ ಸಮಾಧಾನಿಸಿದ್ದಾರೆ.