ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ರೈತರ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ ಯೋಧರ ಮೇಲೆ ಬಾಂಗ್ಲಾದೇಶಿ ದುಷ್ಕರ್ಮಿಗಳು ಮತ್ತು ಗ್ರಾಮಸ್ಥರು ದಾಳಿ ಮಾಡಿದ್ದಾರೆ. ಘಟನೆಯಲ್ಲು ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಜವಾನರು ತೀವ್ರ ಗಾಯಗೊಂಡಿದ್ದಾರೆ. ಬಿಎಸ್ಎಫ್ ಈ ವಿಷಯವನ್ನು ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶದೊಂದಿಗೆ (ಬಿಜಿಬಿ) ಪ್ರಸ್ತಾಪಿಸಿ ಸಭೆಗೆ ಕರೆದಿದೆ.
ಬೆಂಗಾಲ್ ಫ್ರಾಂಟಿಯರ್ನ ಬರ್ಹಾಂಪೋರ್ ಸೆಕ್ಟರ್ನ 35 ಬೆಟಾಲಿಯನ್ ಬಾರ್ಡರ್ ಔಟ್ ಪೋಸ್ಟ್ ನಿರ್ಮಲ್ಚಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ರೈತರ ದೂರುಗಳ ಪ್ರಕಾರ, ಬಾಂಗ್ಲಾದೇಶದ ರೈತರು ತಮ್ಮ ಜಾನುವಾರುಗಳನ್ನು ಮೇಯಿಸಲು ಭಾರತೀಯ ರೈತರ ಹೊಲಗಳಿಗೆ ಬಿಟ್ಟು ಉದ್ದೇಶಪೂರ್ವಕವಾಗಿ ಅವರ ಬೆಳೆಗಳನ್ನು ಹಾನಿಗೊಳಿಸುತ್ತಾರೆ. ಭಾರತೀಯ ರೈತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಬಿಎಸ್ಎಫ್ ಯೋಧರು ತಾತ್ಕಾಲಿಕವಾಗಿ ಗಡಿಯ ಬಳಿ ಪೋಸ್ಟ್ ಅನ್ನು ಸ್ಥಾಪಿಸಿದ್ದರು.
ಗಡಿಯಲ್ಲಿ ಕರ್ತವ್ಯದಲ್ಲಿದ್ದ ಜವಾನರು ಬಾಂಗ್ಲಾದೇಶದ ರೈತರ ಜಾನುವಾರುಗಳನ್ನು ಭಾರತೀಯ ರೈತರ ಹೊಲಗಳಿಗೆ ಬಿಡುವುದನ್ನು ತಡೆದರು. ತಕ್ಷಣವೇ ಬಾಂಗ್ಲಾದೇಶದಿಂದ ನೂರಕ್ಕೂ ಹೆಚ್ಚು ಗ್ರಾಮಸ್ಥರು ಮತ್ತು ದುಷ್ಕರ್ಮಿಗಳು ಭಾರತದ ಕಡೆ ಪ್ರವೇಶಿಸಿ ಜವಾನರ ಮೇಲೆ ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಿದರು.
ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾಹಿತಿ ಪಡೆದ ನಂತರ, ಹೆಚ್ಚಿನ ಬಿಎಸ್ಎಫ್ ಜವಾನರು ಘಟನೆ ಸ್ಥಳಕ್ಕೆ ತಲುಪಿ ಗಾಯಗೊಂಡ ಜವಾನರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಘಟನೆಯ ಬಗ್ಗೆ ಬಿಎಸ್ಎಫ್ ಅಧಿಕಾರಿಗಳು ತಕ್ಷಣವೇ ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ಅಧಿಕಾರಿಗಳಿಗೆ ಮಾಹಿತಿ ನೀಡಿ ಬಾಂಗ್ಲಾದೇಶಿ ದುಷ್ಕರ್ಮಿಗಳಿಂದ ಜವಾನರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ಘಟನೆ ಪುನರಾವರ್ತನೆಯಾಗದಂತೆ ಧ್ವಜ ಸಭೆಯನ್ನು ಆಯೋಜಿಸುವಂತೆ ಹೇಳಿದರು.