ಹೊಸದಿಗಂತ ವರದಿ ತುಮಕೂರು:
ಸಮ ಸಮಾಜದ ನಿರ್ಮಾಣಕ್ಕೆ ಶ್ರಮಪಟ್ಟಂತಹ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಅಖಿಲ ಭಾರತ ವೀರಶೈವ ಮಹಾಸಭಾ, ಹಾಗು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ ಬಸವಣ್ಣ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಶ್ರಮ ಸಂಸ್ಕೃತಿಯ ಹರಿಕಾರರಾಗಿದ್ದ ಬಸವಣ್ಣ ಸಮಾಜದಲ್ಲಿನ ತಾರತಮ್ಯ ಭಾವನೆಯನ್ನು ಹೋಗಲಾಡಿಸಲು ಶ್ರಮಪಟ್ಟವರು ಎಂದರು.
12ನೇ ಶತಮಾನದಲ್ಲಿ ರಾಜಶ್ರಯದಲ್ಲಿದ್ದ ಬಸವಣ್ಣ ಕನ್ನಡ ಭಾಷೆಯನ್ನು, ಸಾಹಿತ್ಯ ವನ್ನು ವಚನಗಳ ಮೂಲಕ ಜನಸಾಮಾನ್ಯರ ಕಡೆಗೆ ತಂದವರು. ಶರಣ ಸಂಸ್ಕೃತಿ ಹರಿಕಾರರಾಗಿದ್ದ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ಮಾಡಿದವರು.ಇಂದಿನ ಪ್ರಜಾಪ್ರಭುತ್ವದ ಆಶಯವೂ ಇದೆ ಆಗಿದೆ ಎಂದರು.
ಅಂದಿನ ಶರಣರು ದೇಹ ಮತ್ತು ಮನಶುದ್ದಿಯನ್ನು ಅಳವಡಿಸಿಕೊಂಡಿದ್ದರು.ಇಂದು ಬಸವಣ್ಣನವರ ವಚನಗಳನ್ನು ಅಳವಡಿಸಿಕೊಂಡಿದ್ದೆ ಆದಲ್ಲಿ ಸಮಾಜದಲ್ಲಿ ತಂಟೆ- ತಕರಾರು ಜಗಳಗಳು ಇರುವುದಿಲ್ಲ. ನುಡಿದಂತೆ ನಡೆದ, ನಡೆದಂತೆ ನುಡಿದ ಅವರ ನಡೆ ಅನುಕರಣನೀಯ.ಇಂದಿನ ಸಮಾಜ ಅವರ ತತ್ವಾದರ್ಶಗಳನ್ನು ಪಾಲಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್, ತಹಶಿಲ್ದಾರ್ ಮೋಹನ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಮೇಲ್ವಿಚಾರಕ ಡಿ.ವಿ ಸುರೇಶ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ, ನಗರ ವೀರಶೈವ ಸಮಾಜದ ಸೇವಾ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.