ಹೊಸದಿಗಂತ ವರದಿ, ಮಡಿಕೇರಿ:
ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕೊಡಗಿನಲ್ಲೂ ಪೊಲೀಸರು ಅಲರ್ಟ್ ಆಗುವ ಅಗತ್ಯವಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಡಿಕೇರಿ ನಗರ, ತಾಲೂಕು, ವೀರಾಜಪೇಟೆ, ಸೋಮವಾರಪೇಟೆಯ ಕೆಲವು ಭಾಗಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಕೊಡಗು ಜಿಲ್ಲೆ ಹೆಚ್ಚು ತೋಟಗಳಿರುವ ಪ್ರದೇಶ. ಇಲ್ಲಿ ಯಾರು ಬಂದು ನೆಲೆಸಿದರೂ ಗೊತ್ತಾಗುವುದಿಲ್ಲ. ಆದ್ದರಿಂದ ಪೊಲೀಸರು ಅಲರ್ಟ್ ಆಗಬೇಕು ಎಂದರು.
ಸುಮಾರು 8 ವರ್ಷಗಳ ಹಿಂದೆ ನನ್ನ ಮನೆಯ ಬಳಿಯೇ ಮದನಿ ಗ್ಯಾಂಗ್ ಬಾಂಬ್ ತಯಾರಿಕೆಯಲ್ಲಿ ತೊಡಗಿತ್ತು. ಹೂವಿನ ಕುಂಡಗಳ ಸರಬರಾಜು ಮಾಡುವ ನೆಪದಲ್ಲಿ ಸ್ಫೋಟಕಗಳನ್ನು ಸಾಗಿಸಲಾಗಿತ್ತು. ಈ ಬಗ್ಗೆ ಅಂದು ಪೊಲೀಸರಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದರು. ಹೂವಿನ ಕುಂಡಗಳ ಮೂಲಕವೇ ಸ್ಫೋಟಕವನ್ನು ಸ್ಫೋಟಿಸುವ ಕೆಲಸವಾಗಿತ್ತು. ಆದ್ದರಿಂದ ಪೊಲೀಸರು ಎಚ್ಚರಗೊಳ್ಳುವ ಮೂಲಕ ಸಮಾಜಘಾತುಕ ಚಟುವಟಿಕೆಯ ಸಂಘಟನೆಗಳ ವಿರುದ್ಧ ಹೆಚ್ಚಿನ ನಿಗಾ ವಹಿಸಬೇಕೆಂದು ಅಪ್ಪಚ್ಚುರಂಜನ್ ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ