ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ರಾಮನ ಭಕ್ತನಾಗಲು ಅರ್ಹತೆ ಹೊಂದಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜೂಗೌಡ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ನೂತನ ವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾದ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಹುಲಿಯಲ್ಲ. ಅವರು ಹೆಬ್ಬುಲಿ ಇದ್ದಾರೆ ಎಂದು ಹೇಳಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮಗ ಬಿವೈವಿ ಅವರನ್ನು ಹೆಬ್ಬುಲಿಯಾಗಿ ಬೆಳೆಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ನನ್ನ ಒಬ್ಬ ಆತ್ಮೀಯ ಸ್ನೇಹಿತರಿದ್ದಾರೆ ಪ್ರಿಯಾಂಕ್ ಖರ್ಗೆ. ಅವರು ನಾನು ರಾಮನ ಭಕ್ತನಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಪ್ರಿಯಾಂಕ್ ಖರ್ಗೆ ಅವರೇ, ರಾಮನ ಭಕ್ತನಾಗಲು ಅರ್ಹತೆ ಹೊಂದಿರಬೇಕು ಎಂದು ತಿವಿದರು.
ನೀನು ಯಾರ ಭಕ್ತ ಅನ್ನುವುದು ನನಗೆ ಗೊತ್ತಿದೆ. ನಾನು ನೀನು ಇಬ್ಬರೇ ಇದ್ದಾಗ ಹೇಳುತ್ತೇನೆ. ರಾಮ ಮಂದಿರ ಉದ್ಘಾಟನೆಯ ಆಗಿರುವುದು ಖರ್ಗೆ ಗೆ ಹೊಟ್ಟೆಯುರಿ ಉಂಟಾಗಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಷ್ಯಾದ ಅತೀ ದೊಡ್ಡ ಬುದ್ಧಮಂದಿರ ಕಟ್ಟಿಸಿದ್ದಾರೆ. ಆ ಬುದ್ಧ ಮಂದಿರ ನೋಡಿ ನಮಗೇನೂ ಹೊಟ್ಟೆಯೂರಿ ಉಂಟಾಗಿಲ್ಲ. ಬದಲಾಗಿ ದೊಡ್ಡ ಖರ್ಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಎಂಪಿಯನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಕಳಿಸುತ್ತೇವೆ ಎಂದು ನುಡಿದರು.