ಮಮತಾ ಬ್ಯಾನರ್ಜಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ!; ‘ಅಪಮಾನವಾಯ್ತೆಂದುʼ ತಮ್ಮ ಪ್ರಶಸ್ತಿ ಮರಳಿಸಿದ ಖ್ಯಾತ ಲೇಖಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಾಂಗ್ಲಾ ಅಕಾಡೆಮಿ ವಿಶೇಷ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದನ್ನು ವಿರೋಧಿಸಿ ಬಂಗಾಳಿ ಲೇಖಕಿ ಮತ್ತು ಜಾನಪದ ಸಂಸ್ಕೃತಿ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ಅಕಾಡೆಮಿ ತಮಗೆ ನೀಡಿದ್ದ ‘ಆನಂದ ಶಂಕರ್ ಸ್ಮಾರಕ ಸಮ್ಮಾನ್’ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ಗೌರವಸೂಚಕವಾಗಿ 2019 ರಲ್ಲಿ ಅಕಾಡೆಮಿ ನೀಡಿದ್ದ ಪ್ರಶಸ್ತಿಯನ್ನು ರತ್ನಾ ಹಿಂದಿರುಗಿಸಿದ್ದಾರೆ. ಈ ಬೆನ್ನಲ್ಲೇ ಶಿಕ್ಷಣ ಸಚಿವೆಯೂ ಆಗಿರುವ ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರಿಗೆ ಪತ್ರ ಬರೆದಿರುವ ರತ್ನಾ, “ಮಮತಾ ಬ್ಯಾನರ್ಜಿಗೆ ಹೊಸ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರ ಕೇಳಿ ನನಗೆ ನೀಡಿರುವ ಪ್ರಶಸ್ತಿ ಮುಳ್ಳಿನ ಕಿರೀಟದಂತೆ ಭಾಸವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ಪ್ರಶಸ್ತಿಯನ್ನು ಹಿಂದಿರುಗಿಸುವ ನನ್ನ ನಿರ್ಧಾರದ ಬಗ್ಗೆ ಪತ್ರದಲ್ಲಿ ತಿಳಿಸಿದ್ದೇನೆ. ಮುಖ್ಯಮಂತ್ರಿಗಳನ್ನು ಓಲೈಸಲು ಸಾಹಿತ್ಯ ಪ್ರಶಸ್ತಿ ನೀಡುವ ಕ್ರಮದಿಂದ ಒರ್ವ ಬರಹಗಾರ್ತಿಯಾಗಿ ನನಗೆ ಅವಮಾನವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ಕೆಟ್ಟ ನಿದರ್ಶನವಾಗಿ ನಿಲ್ಲುತ್ತದೆ. ಮುಖ್ಯಮಂತ್ರಿಯವರ ʼನಿರಂತರ ಸಾಹಿತ್ಯದ ಅನ್ವೇಷಣೆʼಯನ್ನು ಹೊಗಳಿರುವ ಅಕಾಡೆಮಿಯ ಹೇಳಿಕೆಯು ಸತ್ಯದ ಅಪಹಾಸ್ಯವಾಗಿದೆ ಎಂದು ರಶೀದ್ ಬ್ಯಾನರ್ಜಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಸೋಮವಾರ ರವಿಂದ್ರನಾಥ ಟ್ಯಾಗೋರ್ ಅವರ ಜನ್ಮದಿನೊತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿಯವರ 900 ಕ್ಕೂ ಹೆಚ್ಚು ಕವನಗಳ ಸಂಕಲನ ‘ಕಬಿತಾ ಬಿಟನ್’ ಪುಸ್ತಕಕ್ಕೆ ಈ ವರ್ಷದಿಂದ ನೀಡಲಾಗುತ್ತಿರುವ ʼವಿಶೇಷʼ ಪ್ರಶಸ್ತಿಯನ್ನು ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಉಪಸ್ಥಿತರಿರದಿದ್ದರಿಂದ ಅವರ ಪರವಾಗಿ ಬ್ರತ್ಯಾ ಬಸು ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು.
ಮಮತ ಬ್ಯಾನರ್ಜಿ ರಾಜಕೀಯದಲ್ಲಿ ಮಾಡಿದ ಸಾಧನೆಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮೀಕರಿಸಬಾರದಿತ್ತು. ಮಮತ ಸಾಹಿತ್ಯ ಕ್ಷೇತ್ರದಲ್ಲಿ ಏನು ಸಾಧಿಸಿದ್ದಾರೋ ನನಗಂತೂ ತಿಳಿದಿಲ್ಲ. ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಘೋಷಣೆಯಾದ ನಂತರ ಮುಖ್ಯಮಂತ್ರಿಗಳು ಪ್ರಶಸ್ತಿಯನ್ನು ಸ್ವೀಕರಿಸದೆ ಪ್ರಬುದ್ಧತೆಯನ್ನು ತೋರಿಸಬಹುದಿತ್ತು ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ.
ರತ್ನಾ ಅವರು 30 ಕ್ಕೂ ಹೆಚ್ಚು ಲೇಖನಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರು ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ಒಳಗೊಂಡಂತೆ ಜಾನಪದ ಸಂಸ್ಕೃತಿಯ ಕುರಿತು ಸಂಶೋಧನಾ ಕಾರ್ಯಗಳನ್ನು ಮಾಡಿದ್ದಾರೆ. ಸಾಹಿತ್ಯ ಮತ್ತು ಸಮಾಜದ ಇತರ ಕ್ಷೇತ್ರಗಳ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವವರಿಗೆ ಬಾಂಗ್ಲಾ ಅಕಾಡೆಮಿ ನೀಡುವ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. 2020 ರ ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪುಸ್ತಕ ‘ಕಬಿತಾ ಬಿಟಾನ್’ ಬಿಡುಗಡೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!