ಹೊಸದಿಗಂತ ವರದಿ ಹುಬ್ಬಳ್ಳಿ:
ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು ದೆಹಲಿ ಕಚೇರಿ ತೊರೆದು ಭಾರತ ಜೋಡೋ ಅಭಿಯಾನದಲ್ಲಿ ಭಾಗವಹಿಸಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗವಾಡಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಭಾರತ್ ಜೋಡೋ ಅಭಿಯಾನ, ಭಾರತ್ ತೋಡೋ ಅಭಿಯಾನ ಆಗದಿರಲಿ ಎಂದರು.
ಕರ್ನಾಟಕ, ಭಾರತ, ಭಾರತ ಮಾತೆಯನ್ನು ಗೌರವಿಸುವ ರಾಜ್ಯವಾಗಿದೆ. ಭಾರತ ಮಾತೆ ಗೌರವಿಸುವ ಜನರನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಎಂದು ತಿಳಿಸಿದರು. ಮೊದಲಿನಿಂದಲೂ ಆರ್ ಎಸ್ ಎಸ್ ಟಾರ್ಗೆಟ್ ಮಾಡಲಾಗುತ್ತಿದೆ. ಆರ್ ಎಸ್ ಎಸ್ ದೇಶದ ಹಿತ ಬಗ್ಗೆ ನಂಬಿಕೆ ಇಟ್ಟಿರುವ ಸಾಂಸ್ಕೃತಿಕ ಸಂಘಟನೆಯಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಹಿರಿಯರು. ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಕುಟುಂಬ ರನ್ ಪಕ್ಷವಾಗಿದೆ. ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಆಗಬಾರದು ಎಂದರು.