ಹೊಸದಿಗಂತ ವರದಿ,ಬೆಂಗಳೂರು:
ವಿಮಾನ ಹಾರಾಟದ ವೇಳೆ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕೌಶಿಕ್ ಕರಣ್ (೨೨) ಬಂಧನದಿಂದ ಬಿಡುಗಡೆಯಾಗಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತನು, ಏ.೨೮ ರಂದು ರಾತ್ರಿ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತುರ್ತು ಬಾಗಿಲು ತೆರೆಯಲು ಯತ್ನಿಸಿದನು. ಈತನನ್ನು ವಶಕ್ಕೆ ಪಡೆದು ಠಾಣೆಗೊಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಏ.೨೮ರಂದು ಆರೋಪಿ, ಕೊಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ. ರಾತ್ರಿ ೮.೧೫ ಗಂಟೆಗೆ ಕೊಲ್ಕತ್ತಾದಿಂದ ಹೊರಟಿದ್ದ ಇಂಡಿಗೊ ವಿಮಾನ, ರಾತ್ರಿ ೧೦.೩೦ಕ್ಕೆ ಬೆಂಗಳೂರು ನಿಲ್ದಾಣ ತಲುಪಿಸಬೇಕಿತ್ತು. ಈ ವೇಳೆ ಆರೋಪಿ, ತುರ್ತು ಬಾಗಿಲು ಬಳಿ ತನಗೆ ಆಸನ ನೀಡುವಂತೆ ಸಿಬ್ಬಂದಿಗೆ ಅವಕಾಶ ನೀಡಲಾಗಿತ್ತು. ವಿಮಾನ ಹಾರಾಟ ನಡೆಸುತ್ತಿದ್ದ ಸಂದ‘ರ್ದಲ್ಲಿಯೇ ಆರೋಪಿ ತುರ್ತು ಬಾಗಿಲು ತೆರೆಯಲು ಮುಂದಾಗಿದ್ದ. ಅದನ್ನು ಗಮನಿಸಿದ್ದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಆತನನ್ನು ತಡೆದಿದ್ದರು. ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿದ್ದರು. ಅವರು ಠಾಣೆಗೆ ಕರೆ ತಂದರು ಎಂದು ಪೊಲೀಸರು ಹೇಳಿದರು.