ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು ಭಾರತದ ರಕ್ಷಣಾ ಮತ್ತು ಆರ್ಥಿಕ ವಲಯಕ್ಕೆ ಹೊಸ ಬೂಸ್ಟರ್ ಡೋಸ್ ನೀಡಿದೆ. ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಮಹತ್ವದ ಸಭೆಗಳ ಬೆನ್ನಲ್ಲೇ ಉಭಯ ದೇಶಗಳು ಭಾರತದೊಂದಿಗೆ ರಕ್ಷಣಾ ಸಹಕಾರ ಮತ್ತು ವ್ಯಾಪಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಆಸಕ್ತಿ ತೋರಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಮಾತುಕತೆಗಳ ಫಲವಾಗಿ ಭಾರತದ ರಕ್ಷಣಾ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆ ಸಿಗುವ ಮುನ್ಸೂಚನೆ ಸಿಕ್ಕಿದೆ.
ಭಾರತದ ಶಸ್ತ್ರಾಸ್ತ್ರ ಖರೀದಿಗೆ ಮಲೇಷ್ಯಾ, ಇಥಿಯೋಪಿಯಾ ಒಲವು
ಭಾರತೀಯ ರಕ್ಷಣಾ ಅಧಿಕಾರಿಗಳ ಪ್ರಕಾರ, ಈ ಸಭೆಗಳಲ್ಲಿ ಭಾರತದಿಂದ ಆಧುನಿಕ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದು ಹಾಗೂ ಭಾರತೀಯ ಸೇನೆಯೊಂದಿಗೆ ಜಂಟಿ ಮಿಲಿಟರಿ ತರಬೇತಿ ಪಡೆಯುವ ಕುರಿತು ಗಂಭೀರ ಚರ್ಚೆ ನಡೆದಿದೆ. ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಅವರು ಭಾರತದ ಗಣಿಗಾರಿಕೆ ಕಂಪನಿಗಳನ್ನು ತಮ್ಮ ದೇಶಕ್ಕೆ ಮುಕ್ತವಾಗಿ ಸ್ವಾಗತಿಸಿದ್ದಾರೆ. ಹಾಗೆಯೇ ಮಲೇಷ್ಯಾ ಜತೆಗೆ ಸೆಮಿಕಂಡಕ್ಟರ್ ಉದ್ಯಮದಲ್ಲಿ ಜಂಟಿ ಹೂಡಿಕೆ ಮಾಡುವ ಮತ್ತು ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಿದ್ದಾರೆ.
ಮಲೇಷ್ಯಾದಲ್ಲಿ ಭಾರತದ ಹೊಸ ರಾಯಭಾರಿ ಕಚೇರಿ
ಪ್ರಧಾನಿ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು 2026ರ ಫೆಬ್ರವರಿಯಲ್ಲಿ ಮೋದಿ ಅವರು ಮಲೇಷ್ಯಾಕ್ಕೆ ನೀಡಿದ್ದ ಭೇಟಿಯ ಪ್ರಗತಿಯನ್ನು ಪರಿಶೀಲಿಸಿದರು. ಇದೇ ವೇಳೆ ಮಲೇಷ್ಯಾದ ಸಬಾ ಪ್ರಾಂತ್ಯದ ಕೋಟಾ ಕಿನಾಬಾಲು ಎಂಬಲ್ಲಿ ಭಾರತದ ಹೊಸ ಕಾನ್ಸುಲೇಟ್ ಜನರಲ್ಕಚೇರಿಯನ್ನು ತೆರೆಯಲು ಮಲೇಷ್ಯಾ ಒಪ್ಪಿಗೆ ನೀಡಿದೆ. ಇದು ಅಲ್ಲಿರುವ ಭಾರತೀಯರಿಗೆ ಮತ್ತು ಪ್ರವಾಸಿಗರಿಗೆ ದೊಡ್ಡ ನೆರವಾಗಲಿದೆ. ಫಿಂಟೆಕ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವಲಯದಲ್ಲೂ ಜತೆಯಾಗಿ ಕೆಲಸ ಮಾಡಲು ಉಭಯ ನಾಯಕರು ನಿರ್ಧರಿಸಿದ್ದಾರೆ.
ಗ್ಲೋಬಲ್ ಸೌತ್ ಧ್ವನಿಯಾದ ಇಥಿಯೋಪಿಯಾ
ಇನ್ನು ಇಥಿಯೋಪಿಯಾ ಪ್ರಧಾನಿ ಜತೆಗಿನ ಸಭೆಯಲ್ಲಿ, 2025ರ ಡಿಸೆಂಬರ್ನಲ್ಲಿ ಮೋದಿ ಅವರು ಅಡಿಸ್ ಅಬಾಬಾಕ್ಕೆ ಭೇಟಿ ನೀಡಿದ್ದಾಗ ಮಾಡಿಕೊಂಡಿದ್ದ ಒಪ್ಪಂದಗಳ ಪ್ರಗತಿಯನ್ನು ಪರಾಮರ್ಶಿಸಲಾಯಿತು. ಬ್ರಿಕ್ಸ್ ಶೃಂಗಸಭೆಯಲ್ಲಿ ಇಥಿಯೋಪಿಯಾ ಭಾಗವಹಿಸಿರುವುದು ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಯುದ್ಧಗಳ ಕಾರ್ಮೋಡದ ಮಧ್ಯೆ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಮೇಕ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳಿಗೆ ಇಷ್ಟೊಂದು ಬೇಡಿಕೆ ಬರುತ್ತಿರುವುದು ಭಾರತದ ರಕ್ಷಣಾ ರಫ್ತು ಕ್ಷೇತ್ರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ.



