ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುತೇಕ ಸರ್ಕಾರಿ ಕಚೇರಿಗಳಿಗೆ ಇಲಿಗಳ ಹಾವಳಿಗೆ ಅಮೂಲ್ಯ ಕಡತಗಳು ನಾಶವಾಗುವ ಭೀತಿ ಕಾಡುತ್ತಿದ್ದರೆ ಇಲ್ಲೊಂದು ಪೊಲೀಸ್ ಠಾಣೆ ಮಾತ್ರ ಈ ಚಿಂತೆ ಇಲ್ಲದೆ ನೆಮ್ಮದಿಯಲ್ಲಿದೆ! ಇದು ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಗ್ರಾಮಾಂತರ ಠಾಣೆ. ಇಲ್ಲಿ ಆರಕ್ಷಕರಿಗೆ ರಕ್ಷಕನಾಗಿದ್ದಾನೆ ಬೀರ!
ಉಳಿದ ಕಚೇರಿಗಳಲ್ಲಿ ನಡೆಯುವಂತೆ ನಮ್ಮಲ್ಲೂ ಇಲಿಗಳು ದಾಳಿ ಮಾಡಿ ಕೆತ ನಾಶ ಮಾಡಿದರೆ ಎಂಬ ಚಿಂತೆ ಇಲ್ಲಿನ ಠಾಣಾಕಾರಿಯವರನ್ನು ಕಾಡುತ್ತಿತ್ತು. ಅದಕ್ಕೆ ಪರಿಹಾರ ಹೇಳಿದ್ದು ಠಾಣೆಯ ರೈಟರ್. ಅವರು ತಮ್ಮ ನೆರೆಮನೆಯಿಂದ ಬೆಕ್ಕೊಂದನ್ನು ತಂದಿದ್ದರು. ಸಿಬ್ಬಂದಿಯೆಲ್ಲ ಸೇರಿ ಅದಕ್ಕೆ ಅಕ್ಕರೆಯಿಂದ ಬೀರ ಎಂದು ನಾಮಕರಣ ಮಾಡಿದ್ದರು. ಹಾಲು, ಅನ್ನ ನೀಡಿ ಮುದ್ದಾಗಿ ಸಾಕಿ ಬೆಳೆಸಿದ್ದರು. ಈಗ ಈ ಬೀರ ದಾಖಲೆಗಳನ್ನು ಕಾಯುತ್ತಿದೆ. ಪೊಲೀಸರ ಚಿಂತೆ ದೂರವಾಗಿದೆ.
ಅಂದಹಾಗೆ ಬೀರಾ, ಅತ್ಯಂತ ಸ್ನೇಹಮಯಿ. ಮಹಿಳಾ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಾಗಿದ್ದರೆ, ಒಟ್ಟಾರೆ ಠಾಣೆಯಲ್ಲಿನ ಒತ್ತಡ ನಿವಾರಣೆಗೂ ಬೀರ ನೆರವಾಗುತ್ತಿದೆ.