ಹೊಸದಿಗಂತ ವರದಿ, ಕಾಸರಗೋಡು:
ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿಯೇ ಆಚರಿಕೊಳ್ಳಬೇಕೆಂಬ ಮಹದಾಸೆ ಹೊತ್ತಿದ್ದ ಮಂಜೇಶ್ವರ ತಾಲೂಕಿನ ವರ್ಕಾಡಿ ಕಲ್ಲೂರು ಗ್ರಾಮದ ಪುಟ್ಟ ಹುಡುಗನ ಕೋರಿಕೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಜನಕೀಯ ಪೊಲೀಸರು ಈಡೇರಿಸಿದ್ದಾರೆ.
ವರ್ಕಾಡಿಯ ಕಲ್ಲೂರಿನ ಅಝೀಝ್ ಕಲ್ಲೂರು ಮತ್ತು ಆರಿಫಾ ದಂಪತಿಯ ಪುತ್ರ, ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶಿಲ್ ತನ್ನ ಆಸೆಯಂತೆ ಶನಿವಾರ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು.
ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶಿಲ್ ತಂದೆ ತಾಯಿ ಬಳಿ ಪಟ್ಟು ಹಿಡಿದಿದ್ದನು. ಈ ನಿಟ್ಟಿನಲ್ಲಿ ತಂದೆ ಅಝೀಜ್ ಕಲ್ಲೂರು ಅವರು ಮಂಜೇಶ್ವರ ಠಾಣೆಯ ಜನಕೀಯ ಪೊಲೀಸರನ್ನು ಸಂಪರ್ಕಿಸಿದರು. ಆಶಿಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರು.
ಮಂಜೇಶ್ವರ ಸರ್ಕಲ್ ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ಗಳಾದ ಟೋನಿ, ಅನ್ಸಾರ್ ಸಹಿತ ಠಾಣೆಯ ಪೊಲೀಸರು ಆಶಿಲ್ ನ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಶುಭಹಾರೈಸಿದರು. ಅಲ್ಲದೆ ಬಾಲಕನ ತಂದೆ ತಾಯಿ ಹಾಗೂ ಇನ್ನಿತರ ಸ್ನೇಹಿತರೂ ಪಾಲ್ಗೊಂಡು ಹರಸಿದರು.