ಗೂಂಡಾಗಿರಿ ನಡೆಸಿದ ಸಂಸದ ಡಿ.ಕೆ.ಸುರೇಶ್ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು: ಬಿಜೆಪಿ ಆಗ್ರಹ

ಹೊಸದಿಗಂತ ವರದಿ, ಮೈಸೂರು:

ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ವಿರುದ್ಧ ಸಿಎಂ ಸಮ್ಮುಖದಲ್ಲಿಯೇ ಗೂಂಡಾಗಿರಿ ನಡೆಸಿರುವ ಸಂಸದ ಡಿ.ಕೆ.ಸುರೇಶ್ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಬಿಜೆಪಿ ಆಗ್ರಹಿಸಿದೆ.
ಮಂಗಳವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮೈಸೂರು ವಕ್ತಾರ ಎಂ.ಎ.ಮೋಹನ್, ಕರ್ನಾಟಕದಲ್ಲಿ ಮೂರು ಸಮಾಜ ವಿರೋಧಿ ಘಟನೆಗಳಿಗೆ ಕಾಂಗ್ರೆಸ್ ಪಕ್ಷ ಸಾಕ್ಷಿಯಾಗಿದೆ.
1975ನೇ ಇಸವಿಯಲ್ಲಿ ರಾಮನಗರ ಇಡೀ ದೇಶಕ್ಕೆ ಪರಿಚಯವಾಗಿತ್ತು, ಕಾರಣ ಅಂದಿನ ‘ಶೋಲೆ’
ಚಿತ್ರ. ಆ ಚಿತ್ರದ ಪ್ರಮುಖ ಪಾತ್ರಧಾರಿ ‘ಗಬ್ಬರ್‌ಸಿಂಗ್’ ನಿಂದ. ಭಾನುವಾರ ಅದೇ ರಾಮನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಸಂವಿಧಾನ ವಿರೋಧಿಯಾಗಿ, ಗೂಂಡಾಗಿರಿಯನ್ನು ನಡೆಸುವ ಮೂಲಕ ನಾಡಿನ ಜನಕ್ಕೆ ಅವಮಾನ ಮಾಡಿದ್ದಾರೆ. ಅವರ ನಡವಳಿಕೆ ಅಮಾನವೀಯ ಹಾಗೂ ಅಪ್ರಬುದ್ಧತೆಯಾಗಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಡಿ.ಕೆ. ಸುರೇಶ್ ತಕ್ಷಣ ರಾಜ್ಯದ ಜನತೆಯ ಕ್ಷಮೆಯನ್ನು ಯಾಚಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಸಂಸದರಿಗೆ ಹಾಗೂ ಶಾಸಕರಿಗೆ ಸಂವಿಧಾನಬದ್ಧವಾಗಿ ನಡೆದುಕೊಳ್ಳುವ ಪಾಠವನ್ನು ಹೇಳಿಕೊಡುವುದು ಅಗತ್ಯವಾಗಿದೆ. ಇಂತಹ ಗೂಂಡಾಗಳನ್ನು ಮತ್ತೊಮ್ಮೆ ಜನ ಗೆಲ್ಲಿಸಬೇಕಾ ? ಎಂಬುದನ್ನು ವಿಚಾರ ಮಾಡಬೇಕಾಗಿದೆ ಎಂದರು.
ಮೇಕೆದಾಟು ಯೋಜನೆಗೆ ಸಂಬoಧಿಸಿದoತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮೈಸೂರಿನಲ್ಲಿ ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಿರುವುದು ಬೃಹನ್ನಳೆಯ ಪಾತ್ರವನ್ನೇ ಪರಿಚಯಿಸುತ್ತದೆ. ಪಾದಯಾತ್ರೆಗೆ ಈ ದೇಶದಲ್ಲಿ ಒಂದು ಇತಿಹಾಸವಿದೆ. ಅದಕ್ಕೆ ಉದಾಹರಣೆ ಮಹಾತ್ಮಗಾಂಧಿ.
ಆದರೆ, ಪ್ರಸ್ತುತ ಕಾಂಗ್ರೆಸ್ ಗಾಂಧಿಯವರ ಹೆಸರೇಳಿಕೊಂಡು ತಾನೆ ಸೃಷ್ಟಿಸಿದ ಸಮಸ್ಯೆಗೆ ಪಾದಯಾತ್ರೆಯ ನಾಟಕವಾಡುತ್ತಿದೆ. ಈ ಮೇಕೆದಾಟು ಸಮಸ್ಯೆಗೆ “ಹಸಿರು ನ್ಯಾಯಾಧಿಕರಣ” ಮಾಡಿದ್ದೆ ಕಾಂಗ್ರೆಸ್ಸು. ಇಂದು ಕರ್ನಾಟಕದಲ್ಲಿ ಮೇಕೆದಾಟು ಪರವಾಗಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಪಕ್ಕದಲ್ಲಿರುವ ಅವರದೆ ಪಕ್ಷದ ಅಲೆಯನ್ಸ್ ಇರುವ ತಮಿಳುನಾಡು ಸರ್ಕಾರ ವಿರೋಧ ಮಾಡುತ್ತಿದೆ. ಇದೇ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಿ ಹೋಗಿದ್ದರು ತಿಳಿಸಲಿ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಜಿಲ್ಲಾ ವಕ್ತಾರರಾದ ಮಿರ್ಲೆ ಶ್ರೀನಿವಾಸ್ ಗೌಡ, ಡಾ.ಕೆ.ವಸಂತ ಕುಮಾರ್,ಮಾಧ್ಯಮ ವಕ್ತಾರರಾದ ಎನ್. ರಾಜಕುಮಾರ್, ಹೆಚ್.ಹೆಚ್. ಮಹೇಶ್ (ಕೇಬಲ್), ಮಹೇಶ್ ರಾಜೇ ಅರಸ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!