ಹೊಸದಿಗಂತ ವರದಿ ಬಳ್ಳಾರಿ:
ಭಯೋತ್ಪಾದಕರನ್ನು, ಕುಕ್ಕರ್ ಬಾಂಬ್ ಇಟ್ಟವರನ್ನು ಕಾಂಗ್ರೆಸ್ ನವರು ಅವರೆಲ್ಲರೂ ನಮ್ಮ ಬ್ರದರ್ಸ್ ಎಂದು ಕರೆದಿದ್ದರು, ಇದು ಕಾಂಗ್ರೆಸ್ ಇತಿಹಾಸ. ಆದರೆ, ನಮ್ಮ ಬಿಜೆಪಿ ಸoಸ್ಕೃತಿಯೇ ಬೇರೆ ಎಂದು ಮಾಜಿ ಸಚಿವ ಸಿ. ಟಿ.ರವಿ ಅವರು ಹೇಳಿದರು.
ಕಾಂಗ್ರೆಸ್ ಇತಿಹಾಸದ ವಿರುದ್ಧ ಟೀಕೆ
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಭಯೋತ್ಪಾದಕರನ್ನು ಸಾಕಿ ಸಲೂಹಿ, ಬಿರಿಯಾನಿ ಕೊಡುವ ಸರ್ಕಾರವಲ್ಲ, ಪಕ್ಷವಲ್ಲ. ದೇಶದಲ್ಲಿ ಆತಂಕ ಸೃಷ್ಟಿಸುವವರ, ಭಯೋತ್ಪಾದಕರನ್ನು ಸಂಹಾರ ಮಾಡುತ್ತೇವೆ ಹೊರತೂ, ಅವರಿಗೆ ರಾಜ ಮರ್ಯಾದೆ ನೀಡಿ, ಬಿರಿಯಾನಿ ಕೊಡುವ ಸರ್ಕಾರ ನಮ್ಮದಲ್ಲ. ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಕಾಂಗ್ರೆಸ್ ನವರು ಅವರು ನಮ್ಮ ಬ್ರದರ್ಸ್ ಅಂತಾರೆ ಅಂದ್ರೆ, ನಾಚಿಕೆಯಾಗಬೇಕು.
ನಕ್ಸಲ್ ಮುಕ್ತ ಭಾರತದ ಸಂಕಲ್ಪ
ನಕ್ಸಲ್ ಮುಕ್ತ ಭಾರತ ಮಾಡುವ ಸಂಕಲ್ಪ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ. ನಗರ ನಕ್ಸಲ್ ರು ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿದ್ದು, ಅವರನ್ನು ತೊಲಗಿಸಬೇಕು ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:
ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯದ ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದು, ಸ್ವಾಗತಾರ್ಹ. ಆದರೆ,ಯಾರಾದರೂ ಲಂಚ ಕೇಳಿದರೆ, ಲಂಚ ಪಡೆದರೆ ನಮ್ಮ ಕಚೇರಿಗೆ ದೂರು ನೀಡಿ, ಗಮನಕ್ಕೆ ತನ್ನಿ ಎಂದು ಸಿ.ಎಂ.ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸ್ವಾಗತಾರ್ಹ. ಆದರೆ, ಸಿ.ಎಂ.ಕಚೇರಿಯೇ ಭ್ರಷ್ಟಾಚಾರ ಕೇಂದ್ರವಾದರೇ ಯಾರಿಗೆ ದೂರು ನೀಡಬೇಕು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗದಿರಲಿ, ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸೋಣ. ಆದರೆ,ಅದು ಆಗದ ಕನಸು, ಏಕೆಂದರೆ ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹಾ, ಎಲ್ಲವನ್ನೂ ಕಾದು ನೋಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಮ್ಮೆಲ್ಸಿ ವೈ.ಎಂ.ಸತೀಶ್, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮಾಜಿ ಸಂಸದ ಸಣ್ಣ ಫಕೀರಪ್ಪ, ಗುರುಲಿಂಗನ ಗೌಡ, ಕೆ.ರಾಮಲಿಂಗಪ್ಪ, ಕೆ.ಎಸ್.ದಿವಾಕರ್, ಕಾರ್ಕಲತೋಟ ಪಾಲಣ್ಣ, ಎಚ್.ಹನುಮಂತಪ್ಪ, ಮುದ್ದನಗೌಡ, ತಿಮ್ಮಪ್ಪ, ಎರಂಗಳಿ ತಿಮ್ಮಾರೆಡ್ಡಿ, ಸುರೇಖಾ ಮಲ್ಲನಗೌಡ ಸೇರಿದಂತೆ ಇತರರಿದ್ದರು.



