ಹೊಸದಿಗಂತ ವರದಿ ಶಿವಮೊಗ್ಗ:
ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸೂತ್ರದಂತೆ ಇಲ್ಲಿನ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಗುತ್ತಿದ್ದು, ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದು ಚುನಾವಣಾ ಉಸ್ತುವಾರಿ ರಘುಪತಿ ಭಟ್ ತಿಳಿಸಿದರು.
ಸೋಮವಾರ ಜೆಡಿಎಸ್ ಮತ್ತು ಬಿಜೆಪಿ ಗ್ರಾಮಾಂತರ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ ಡಿಎ ಮಿತ್ರ ಪಕ್ಷವಾಗಿ ಜೆಡಿಎಸ್ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆಗಳನ್ನು ನಡೆಸಲಾಗಿದ್ದು, ಒಳ್ಳೆಯ ಸಹಕಾರ ಭಾವನೆ ಎರಡೂ ಕಡೆ ವ್ಯಕ್ತವಾಗಿದೆ ಎಂದರು.
ಗ್ರಾಮಾಂತರದಲ್ಲಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆ ನೇರ ಪೈಪೋಟಿ ಇತ್ತು. ಮೈತ್ರಿಯಾದಾಗ ಕಾರ್ಯಕರ್ತರ ನಡುವೆ ಮನಸ್ತಾಪ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಹೋಗಲಾಗುತ್ತದೆ. ಸಂಘಟನಾತ್ಮಕ ಸಭೆಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಸಾರ್ವಜನಿಕ ಸಭೆಗಳು ಒಟ್ಟಿಗೆ ಭಾಗಿಯಾಗಲಾಗುತ್ತದೆ. ಮನೆ ಮನೆಗಳಿಗೆ ಹೋಗುವಾಗ ಒಟ್ಟಿಗೆ ಕರಪತ್ರದೊಂದಿಗೆ ಹೋಗಲಾಗುತ್ತದೆ ಎಂದರು.
ಜೆಡಿಎಸ್ ಒಂದು ವೋಟ್ ಬೇರೆ ಕಡೆ ಹೋಗದಂತೆ ಜತೆಗೆ ಪ್ರಚಾರ ಮಾಡಲಾಗುತ್ತದೆ. ಜಿಪಂ ಕ್ಷೇತ್ರ ಮಟ್ಟದಿಂದಲೂ ಬೂತ್ ಮಟ್ಟದಿಂದಲೂ ಒಟ್ಟಿಗೆ ಪ್ರಚಾರ ಮಾಡಲಾಗುತ್ತದೆ ಎಂದರು.