ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ನನ್ನನ್ನು ಸೋಲಿಸಬೇಕು ಎಂದು ಹೇಳುತ್ತಿದ್ದು, ಬಡಪಾಯಿ ಮೇಲೆ ಯಾಕೆ ಇಷ್ಟೊಂದು ಪ್ರಹಾರ ಎಂದು ಗೊತ್ತಾಗುತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು. ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ನನ್ನನ್ನು ಸೋಲಿಸಲು ಆಂದೋಲನ ನಡೆಸಿದ್ದಾರೆ.
ಬಿಜೆಪಿಗೆ ನಾನು ಏನು ಅನ್ಯಾಯ ಮಾಡಿದ್ದೇನೆ? ಕಾಂಗ್ರೆಸ್ ಸೇರಿದ್ದು, ಅಪರಾಧ ಮಾಡಿದಂತೆ ಬಿಂಬಿಸುತ್ತಿದ್ದಾರೆ. ಐಡಿಯಾಲಜಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು 12 ಜನ ಕಾಂಗ್ರೆಸ್ ನವರನ್ನು ತಂದು ಸರ್ಕಾರ ರಚಿಸಿದ್ದರು. ಆಗ ಏನಾಯ್ತು ಇವರ ಐಡಿಯಾಲಜಿ ಎಂದು ಪ್ರಶ್ನಿಸಿದರು.
ನನ್ನ ಸೋಲಿಸಲು ಹೇಳಿದ ಬಿ.ಎಸ್. ಯಡಿಯೂರಪ್ಪ ಅವರು ಕೆಜಿಪಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಬಿಜೆಪಿ ನನಗೆ ಅನ್ಯಾಯ ಮಾಡಿದ್ದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಪಕ್ಷ ತೊರೆದಿದ್ದೇನೆ ಎಂದರು.