ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇರಳದಲ್ಲಿ ಕೆಲವು ಜಿಲ್ಲೆಗಳು ಸೌದಿ ಅರೇಬಿಯಾದಂತೆ ಭಾಸವಾಗುತ್ತಿವೆ. ದೇಶ ವಿರೋಧಿ ಚಿಂತನೆಯು ವ್ಯಾಪಕವಾಗಿ ಪ್ರಸರಣೆಯಾಗುತ್ತಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ.
ಕೇರಳದಲ್ಲಿ ಹೆಚ್ಚುತ್ತಿರುವ ಧಾಮಿಕ ಮೂಲಭೂತವಾದಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಲ್ಫೋನ್ಸ್, “ಕೇರಳದಲ್ಲಿ ಮುಸ್ಲೀಮರು ಕಟ್ಟರ್ ಇಸ್ಲಾಮಿಕ್ ಚಿಂತನೆಗಳತ್ತ ಒಲವು ತೋರುತ್ತಿರುವುದು ಕಾಣುತ್ತಿದ್ದೇವೆ. ಇದು ಅತ್ಯಂತ ದುಃಖಕರ ವಿಚಾರವಾಗಿದೆ. ನೀವು ಕೇರಳದ ಕೆಲವು ಜಿಲ್ಲೆಗಳಿಗೆ ಹೋದರೆ ಸೌದಿ ಅರೇಬಿಯಾದ ಯಾವುದೋ ಪ್ರಾಂತ್ಯಕ್ಕೆ ತೆರಳಿದಂತೆ ಭಾಸವಾಗುತ್ತದೆ. ಅಲ್ಲಿನ ಜನರ ವರ್ತನೆಯೂ ಸಂಪೂರ್ಣ ಬದಲಾವಣೆ ಕಂಡಿದೆ. ಅವರ ಡ್ರೆಸ್ ಕೋಡ್ ದೇಶ ವಿರೋಧಿ ಚಿಂತನೆಗಳನ್ನು ಪ್ರತಿಬಿಂಬಿಸುವಂತೆ ಮಾರ್ಪಾಡಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರ್ಯಾಲಿಯಲ್ಲಿ ಅಪ್ರಾಪ್ತ ಹಿಂದೂ- ಕ್ರಿಶ್ಚಿಯನ್ನರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಪಿಎಫ್ಐ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕೇರಳ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ.
ಅಲಪ್ಪುಳದಲ್ಲಿ ನಡೆದ ಪಿಎಫ್ಐ ರ್ಯಾಲಿಯಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, “ಹಿಂದೂಗಳು ತಮ್ಮ ಅಂತಿಮ ಸಂಸ್ಕಾರಕ್ಕೆ ಅಕ್ಕಿಯನ್ನು ಸಿದ್ಧವಾಗಿಸಿಕೊಳ್ಳಿ ಮತ್ತು ಕ್ರಿಶ್ಚಿಯನ್ನರು ಅವರ ಅಂತ್ಯಕ್ರಿಯೆಗೆ ಧೂಪವನ್ನು ಸಿದ್ಧಮಾಡಿ. ನೀವು ಮರ್ಯಾದೆಯಿಂದ ಬದುಕಿದರೆ, ನೀವು ನಮ್ಮ ನೆಲದಲ್ಲಿ ಬದುಕಬಹುದು. ನೀವು ಯೋಗ್ಯವಾಗಿ ಬದುಕದಿದ್ದರೆ ನಿಮಗೇನು ಮಾಡಬೇಕು ಎಂಬುದು ತಿಳಿದಿದೆ ಎಂಬ ಮಾತುಗಳು ಎಳೆ ಹುಡುಗನ ಬಾಯಿಯಿಂದ ಹೊರಬಿದ್ದಿವೆ. ಕೇರಳದಲ್ಲಿ ವಾಸಿಸುವ ಹಿಂದೂ ಮತ್ತು ಕ್ರಿಶ್ಚಿಯನ್ನರಿಗೆ ಇದೊಂದು ನೇರ ಬೆದರಿಕೆಯಾಗಿದೆ. ಇಂತಹ ಹೇಳಿಕೆಗೆ ರ್ಯಾಲಿ ಆಯೋಜಿಸಿದ್ದ ಪಿಎಫ್ ಐ ನೇರ ಹೊಣೆಯಾಗಿದೆ. ಕೇರಳದಲ್ಲಿ ಭಯೋತ್ಪಾದಕರು ಹುಟ್ಟುತ್ತಿದ್ದಾರೆ. ಕೇರಳದಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ಅಲ್ಪಸಂಖ್ಯಾತರನ್ನು ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳುತ್ತಿವೆ. ಕೇರಳದ ಕಮ್ಯುನಿಸ್ಟ್ ಸರ್ಕಾರ ಮತಗಳಿಕೆಗಾಗಿ ಕಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಚಿಂತನೆಗಳಿಗೆ ಬೆಂಬಲವಾಗಿ ನಿಲ್ಲುವಂತಹ ಹೀನ ಮಟ್ಟಕ್ಕಿಳಿದಿದೆ ಎಂದು ಆಲ್ಫೋನ್ಸ್ ಕಿಡಿಕಾರಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ