ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರಲಿರುವ ಚುನಾವಣೆಗೆ ಅಧಿಕೃತವಾಗಿ ಸಿದ್ಧತೆ ನಡೆಸುವ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಇದರ ಮೊದಲ ಹಂತವಾಗಿ ಮೂರು ತಂಡಗಳಿಂದ ಮೂರು ಹಂತದಲ್ಲಿ ವಿಭಾಗಶಃ ಸಭೆಗಳನ್ನು ಆಯೋಜಿಸಿದೆ.
ನಾಳೆ ರಾಜ್ಯ ಬಿಜೆಪಿ ಮೂರು ವಿಭಾಗದಲ್ಲಿ ಏಕ ಕಾಲಕ್ಕೆ ಸರಣಿ ಸಭೆ ಆಯೋಜನೆ ಮಾಡಿದ್ದು, ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡವನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುನ್ನಡೆಸಿದರೆ, ಎರಡನೇ ತಂಡದ ನೇತೃತ್ವವನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮೂರನೇ ತಂಡದ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ.
ಕಟೀಲ್ ತಂಡ
ನಳಿನ್ ಕುಮಾರ್ ಕಟೀಲ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತ್ ಕುಮಾರ್, ಎಂ. ರಾಜೇಂದ್ರ ಇರಲಿದ್ದಾರೆ. ಇವರು ಏಪ್ರಿಲ್ 12 ಮತ್ತು 13ರಂದು ಮೈಸೂರು ವಿಭಾಗ, 19 ಮತ್ತು 20ರಂದು ಬಳ್ಳಾರಿ ವಿಭಾಗ, 21 ಮತ್ತು 22ರಂದು ಧಾರವಾಡ ವಿಭಾಗ, 23 ಮತ್ತು 24ರಂದು ಬೆಂಗಳೂರು ನಗರ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.
ಅರುಣ್ ಸಿಂಗ್ ತಂಡ
ಎರಡನೇ ತಂಡದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿದ ಕಾರಜೋಳ, ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಎಂ.ಬಿ ನಂದೀಶ್ ಇರಲಿದ್ದಾರೆ. ಏಪ್ರಿಲ್ 12 ಮತ್ತು 13ರಂದು ಬೆಳಗಾವಿ ವಿಭಾಗ,19 ಮತ್ತು 20ರಂದು ದಾವಣಗೆರೆ ವಿಭಾಗ, 21 ಮತ್ತು 22ರಂದು ಬೆಂಗಳೂರು ಗ್ರಾಮಾಂತರ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.
ಸಿಎಂ ತಂಡ
ಮೂರನೇ ತಂಡದ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದಾರೆ. ಇವರ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ಲಕ್ಷ್ಮಣ ಸವದಿ, ಬಿ.ವೈ ವಿಜಯೇಂದ್ರ, ನಯನಾ ಗಣೇಶ್ ಇರಲಿದ್ದಾರೆ. ಏಪ್ರಿಲ್ 12 ಮತ್ತು13ರಂದು ಮಂಗಳೂರು ವಿಭಾಗ, 19 ಮತ್ತು 20ರಂದು ಶಿವಮೊಗ್ಗ ವಿಭಾಗ, 21 ಮತ್ತು 22ರಂದು ಕಲಬುರಗಿ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.