ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಸಿನಿಮಾ ರಂಗದವರು ರಾಜಕೀಯದತ್ತ ಮುಖ ಮಾಡುತ್ತಿದ್ದು, ಇದೀಗ ಬಾಲಿವುಡ್ ನಟ ಗೋವಿಂದ್ (Govind) ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರ ಶಿವಸೇನೆ (Shiv Sena)ಯನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆಯೇ ಇವರು ಶಿವಸೇನೆ ಸೇರಲಿದ್ದಾರೆ ಸುದ್ದಿಯಾಗಿತ್ತು. ಏಕನಾಥ ಶಿಂಧೆ ಅವರನ್ನೂ ಗೋವಿಂದ್ ಅವರ ಭೇಟಿ ಮಾಡಿದ್ದರು. ವಾಯವ್ಯ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಇಳಿಯುವ ಕುರಿತು ಚರ್ಚೆ ಮಾಡಿದ್ದರು. ಆದರೆ, ಆಗ ಅದು ಅಧಿಕೃತವಾಗಿರಲಿಲ್ಲ. ಈಗ ಶಿವಸೇನೆ ಸೇರ್ಪಡೆಗೊಂಡ ನಂತರ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.
ನಟನಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗೋವಿಂದ್, 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಂಡು, ಬಿಜೆಪಿಯ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಸಾಕಷ್ಟು ಅಂತರದಿಂದ ಸೋಲಿಸಿದ್ದರು.
ಈಗಾಗಲೇ ವಾಯುವ್ಯ ಮುಂಬೈ ಕ್ಷೇತ್ರದಿಂದ ಉದ್ಭವ್ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಇಪ್ಪತ್ತು ವರ್ಷಗಳ ನಂತರ ಮತ್ತೆ ಗೋವಿಂದ್ ರಾಜಕೀಯ ಪ್ರವೇಶ ಮಾಡಿದ್ದರಿಂದ, ಯಾವ ರೀತಿಯಲ್ಲಿ ಪ್ರತಿಸ್ಪರ್ಧೆಗೆ ಠಕ್ಕರ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.