September 11, 2026
Friday, September 11, 2026
spot_img

ಬ್ರಿಕ್ಸ್ ಶೃಂಗಸಭೆಯ ಹವಾ: ಭದ್ರತೆ ಇಲ್ಲದೆ ಅಭ್ಯಾಸಕ್ಕಿಳಿದ ಭಾರತ-ಅಫ್ಘಾನ್ ಆಟಗಾರರು!

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಸೆಪ್ಟೆಂಬರ್ 13 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮ್ಯಾಚ್ ಶುರುವಾಗಬೇಕಿದ್ದು, ಆಟಗಾರರೆಲ್ಲಾ ದೆಹಲಿಗೆ ಬಂದು ಫುಲ್ ಪ್ರಾಕ್ಟೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅಲ್ಲಿ ನಮ್ಮ ಆಟಗಾರರಿಗೆ ಎದುರಾಗಿರುವ ಅನುಭವ ಮಾತ್ರ ಯಾರಿಗೂ ಬೇಡಪ್ಪಾ ಅನ್ನುವಂತಿದೆ.

ಸಾಮಾನ್ಯವಾಗಿ ಟೀಮ್ ಇಂಡಿಯಾ ಆಟಗಾರರು ಎಲ್ಲೇ ಹೋದ್ರೂ ಅವರ ಬಸ್‌ಗೆ ಸೈರನ್ ಹಾಕಿಕೊಂಡು ಹೋಗುವ ಪೊಲೀಸ್ ಬೆಂಗಾವಲು ಪಡೆ, ಮುಂಭಾಗದಲ್ಲಿ ಪೈಲಟ್ ವಾಹನಗಳು ಇರುತ್ತವೆ. ರೋಡ್‌ಗಳನ್ನೆಲ್ಲಾ ಕ್ಲಿಯರ್ ಮಾಡಿ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಗುರುವಾರ ದೆಹಲಿಯಲ್ಲಿ ಪ್ರಾಕ್ಟೀಸ್ ಸೆಷನ್‌ಗೆ ಹೊರಟ ನಮ್ಮ ಕ್ರಿಕೆಟರ್ಸ್‌ಗೆ ಯಾವುದೇ ಪೊಲೀಸ್ ಭದ್ರತೆಯೇ ಸಿಕ್ಕಿಲ್ಲ. ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಬರುವಾಗ ಮತ್ತು ವಾಪಸ್ ಹೋಗುವಾಗ ಯಾವುದೇ ಸೆಕ್ಯೂರಿಟಿ ಗಾಡಿಗಳಿರಲಿಲ್ಲ.

ದೆಹಲಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ‘ಬ್ರಿಕ್ಸ್ ಶೃಂಗಸಭೆ’ ನಡೀತಿದೆ. ಜಗತ್ತಿನ ಪ್ರಮುಖ ದೇಶಗಳ ದೊಡ್ಡ ದೊಡ್ಡ ನಾಯಕರು, ವಿದೇಶಿ ರಾಜತಾಂತ್ರಿಕರು ದೆಹಲಿಗೆ ಬಂದಿಳಿದಿದ್ದಾರೆ. ಹೀಗಾಗಿ, ದೆಹಲಿ ಪೊಲೀಸರ ಸಂಪೂರ್ಣ ಗಮನ ಮತ್ತು ಭದ್ರತೆ ಆ ವಿವಿಐಪಿಗಳ ಕಡೆಗೆ ನೆಟ್ಟಿದೆ. ಒಂದೇ ದಿನ ಬ್ರಿಕ್ಸ್ ಮೀಟಿಂಗ್ ಮತ್ತು ಕ್ರಿಕೆಟ್ ಮ್ಯಾಚ್ ಎರಡಕ್ಕೂ ಭದ್ರತೆ ಕೊಡೋದು ಕಷ್ಟ ಅಂತ ಪೊಲೀಸರು ದೆಹಲಿ ಕ್ರಿಕೆಟ್ ಅಸೋಸಿಯೇಷನ್‌ಗೆ ಪತ್ರ ಕೂಡ ಬರೆದಿದ್ದರಂತೆ. ಆಮೇಲೆ ಮಾತುಕತೆ ನಡೆದು ಪಂದ್ಯವನ್ನು ನಿಗದಿತ ದಿನವೇ ನಡೆಸಲು ನಿರ್ಧರಿಸಲಾಗಿದೆ.

ಬ್ರಿಕ್ಸ್ ಕೆಲಸದಲ್ಲಿ ಪೊಲೀಸರು ಫುಲ್ ಬ್ಯುಸಿಯಾಗಿದ್ದರಿಂದ, ಟೀಮ್ ಇಂಡಿಯಾ ಪ್ರಾಕ್ಟೀಸ್ ಸೆಷನ್‌ಗೆ ಭದ್ರತೆ ನೀಡಲು ಸಾಧ್ಯವಾಗಿಲ್ಲ. ಆದರೆ, ಅಭಿಮಾನಿಗಳು ಗಾಬರಿಪಡುವ ಅಗತ್ಯವಿಲ್ಲ. ಇಂದು ಬ್ರಿಕ್ಸ್ ಶೃಂಗಸಭೆಯ ಮೊದಲ ದಿನವಾದ್ದರಿಂದ ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಂದ್ಯ ನಡೆಯುವ ದಿನದಂದು ಭಾರತ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳಿಗೆ ಸೂಕ್ತ ಭದ್ರತೆ ಸಿಗುವ ಸಾಧ್ಯತೆಯಿದೆ.

ಏನೇ ಆಗಲಿ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವಗಳಾಗಿರೋ ನಮ್ಮ ಕ್ರಿಕೆಟರ್ಸ್ ದೆಹಲಿಯ ರೋಡ್‌ನಲ್ಲಿ ಸೆಕ್ಯೂರಿಟಿ ಇಲ್ಲದೆ ಸಾಧಾರಣ ಜನರಂತೆ ಓಡಾಡಿದ್ದು ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !