ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಕಮಲಾಪುರ ಬಳಿಯ ಚಾರ್ ಕಮಾನ್ ಹತ್ತಿರ ಶುಕ್ರವಾರ ಸಂಭವಿಸಿರುವ ಖಾಸಗಿ ಬಸ್ ದುರಂತದಲ್ಲಿ ಮಗು ಸೇರಿದಂತೆ ತೆಲಂಗಾಣ ರಾಜ್ಯದ 7 ಮಂದಿ ಸಾವನ್ನಪ್ಪಿರುವ ದುರಂತ ಘಟನೆಗೆ ಶಾಸಕ ಡಾ. ಅಜಯ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೈದ್ರಾಬಾದ್, ಸಿಕಿಂದರಾಬಾದ್ನ ನಿವಾಸಿಗಳು 30 ಜನ ಹುಟ್ಟುಹಬ್ಬ ಆಚರಿಸಿಕೊಂಡು ಗೋವಾದಿಂದ ತಮ್ಮೂರಿಗೆ ಮರಳುವಾಗ ದಾರಿಯಲ್ಲಿ ಅವರಿದ್ದ ಬಸ್ ಕಮಲಾಪುರ ಬಳಿ ಭೀಕರ ದುರಂತಕ್ಕೀಡಾಗಿರೋದು ಅತ್ಯಂತ ವಿಷಾದಕರ ಸಂಗತಿ. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಡಾ. ಅಜಯ್ ಸಿಂಗ್ ಪ್ರಾರ್ಥಿಸಿದ್ದಾರೆ.
ಮಾಜಿ ಸಿಎಂ ಹಾಗೂ ತಮ್ಮ ತಂದೆಯವರೂ ಆಗಿದ್ದಂತಹ ದಿ. ಧರಂಸಿಂಗ್ ಅವರು ಪಿಡಬ್ಲೂಡಿ ಸಚಿವರಾಗಿದ್ದಾಗ ಬೀದರ್- ಶ್ರೀರಂಗ ಪಟ್ಟಣ ಹೆದ್ದಾರಿ ಯೋಜನೆ ಅತ್ಯಂತ ಮುತುವರ್ಜಿಯಿಂದ ಮಾಡಿ ಮುಗಿಸಿದ್ದರು. ನಂತರ ಈ ದಾರಿಗೆ ರಾಷ್ಟ್ರೀಯ ಹೆದ್ದಾರಿ 150 ಪಟ್ಟವೂ ದೊರಕಿತ್ತು ಎಂದು ಮೆಲಕು ಹಾಕಿರುವ ಡಾ. ಅಜಯ್ ಸಿಂಗ್ ಈಗ ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಬೇಕು ಎಂಬ ಜನರ ಒತ್ತಾಯವಿದ್ದರೂ ಡಬ್ಬಲ್ ಇಂಜೀನ್ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದ್ದಾರೆ.
ಹುಮ್ನಾಬಾದ್ನಿಂದ ಕಲಬುರಗಿ ಮಾರ್ಗವಾಗಿ ಸಾಗುವ ಹೆದ್ದಾರಿಯಲ್ಲಿ ಸುರಕ್ಷತೆ ಕ್ರಮ, ಸುದಾರಣೆ ಕ್ರಮಗಳನ್ನು ಕೈಗೊಳ್ಳುವಲ್ಲಿ ತೋರುತ್ತಿರುವ ಅಲಕ್ಷತನಗಳೇ ಇಂದು ದುರಂತಗಳಿಗೆ ಕಾರಣವಾಗುತ್ತಿವೆ ಎಂದು ಹೇಳಿದ್ದಾರೆ