ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಸೇವಾ ಭಾರತಿಯಿಂದ ಬಡ ಜನರ ಭೋಜನ ವ್ಯವಸ್ಥೆಗಾಗಿ ಬುತ್ತಿ ಯೋಜನೆ ಆರಂಭಿಸಲಾಗಿದೆ.
ಈ ಸೇವಾ ಪ್ರಕಲ್ಪಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಚಾಲನೆ ನೀಡಿ, ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಬರುತ್ತಾರೆ. ರೋಗಿಗಳಿಗೆ ಆಸ್ಪತ್ರೆ ವತಿಯಿಂದ ಊಟ ಒದಗಿಸಲಾಗುತ್ತದೆ. ಆದರೆ ಅವರ ಜೊತೆಗಾರರಿಗೆ ಸೂಕ್ತ ಭೋಜನ ವ್ಯವಸ್ಥೆ ಇಲ್ಲ.
ಕೊರೋನಾ ಮೂರನೇ ಅಲೆಯಲ್ಲಿ ‘ನೆರವು’ ಹೆಸರಿನಲ್ಲಿ ತಾತ್ಕಾಲಿಕ ಭೋಜನೆ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ಶಾಶ್ವತ ಸ್ವರೂಪ ನೀಡುವುದಕ್ಕಾಗಿ ಬುತ್ತಿ ಯೋಜನೆ ಆರಂಭಿಸಲಾಗಿದೆ. ಇದೇ ರೀತಿ ಧಾರವಾಡದಲ್ಲೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಬುತ್ತಿ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಕಿಮ್ಸ್ ನ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಮಾತನಾಡಿ, ಸೇವಾ ಭಾರತಿಯಿಂದ ನಡೆಯುತ್ತಿರುವ ಈ ಭೋಜನ ವ್ಯವಸ್ಥೆ ಕಾರ್ಯ ಶ್ಲಾಘನೀಯ ಎಂದರು. ಅದಮ್ಯ ಚೇತನ ಸಂಸ್ಥೆಯಿಂದ ಬರುವ ಊಟವನ್ನು ಪ್ರತಿನಿತ್ಯ ಇಲ್ಲಿ ರೋಗಿಗಳ ಜೊತೆಗಾರರಿಗೆ ಹಾಗೂ ಬಡವರಿಗೆ ಕೇವಲ 5 ರೂ. ಗಳಿಗೆ ಒದಗಿಸಲಾಗುತ್ತದೆ.