ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಬೆಲೆ ಇಳಿಸುವಂತೆ ಆಗ್ರಹಿಸಿ ತಮಿಳುನಾಡಿನ ಸಚಿವಾಲಯದವರೆಗೆ ಬೃಹತ್ ಪಾದಯಾತ್ರೆ ನಡೆಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ತಮಿಳುನಾಡು ಸರ್ಕಾರವು ಕೇಸ್ ದಾಖಲಿಸಿದೆ.
ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲು ಅನುಮತಿ ಪಡೆದಿರಲಿಲ್ಲ ಎಂದು ಸರ್ಕಾರವು ಅಣ್ಣಾಮಲೈ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇತರ 5,000 ಜನರ ಮೇಲೆ ಪ್ರಕರಣ ದಾಖಲಿಸಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸಿದ್ದರೂ ರಾಜ್ಯ ಸರ್ಕಾರ ಇಳಿಸಿಲ್ಲ ಎಂಬ ಕಾರಣಕ್ಕೆ ಅಣ್ಣಾಮಲೈ ಮತ್ತಿತರರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಮಂಗಳ ವಾರ ಪ್ರತಿಕ್ರಿಯಿಸಿರುವ ಅಣ್ಣಾ ಮಲೈ “ಡಿಎಂಕೆ ಪಕ್ಷವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಕೇಂದ್ರ ಸರ್ಕಾರವು ಎರಡೆರಡು ಬಾರಿ ಇಳಿಕೆ ಮಾಡಿದರೂ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗಿಲ್ಲ. ಡಿಎಂಕೆ ಪಕ್ಷವು ತನ್ನ ಚುನಾವಣಾ ಘೋಷಣೆಯಂತೆ ಪೆಟ್ರೋಲ್ ಬೆಲೆ ಇಳಿಸಬೇಕು” ಎಂದು ಆಗ್ರಹಿಸಿದ್ದರು.
ಪ್ರಸ್ತುತ ಅವರು ಪ್ರತಿಭಟನೆಗೆ ಅವಕಾಶ ಪಡೆದಿಲ್ಲ ಎಂದು ಅವರ ಮೇಲೆ ಕೇಸ್ ದಾಖಲಿಸಲಾಗಿದೆ.