ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಡಿಯನ್ ಪ್ರೀಮಿಯರ್ ಲೀಗ್ 15 ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ಸ್ ಪಟ್ಟಕ್ಕೇರಿಸಿದ ನಾಯಕ ಹಾರ್ದಿಕ್ ಪಾಂಡ್ಯ ಮತ್ತ ಮುಂದಿನ ಗುರಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತ ತಂಡಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಿಸುವುದು ನನ್ನ ಮುಂದಿನ ಗುರಿ ಎಂಬ ಕನಸನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ನಲ್ಲಿ ರಾಷ್ಟ್ರೀಯ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ತೋರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಬಯಸುವುದಾಗಿ ಹಾರ್ದಿಕ್ ಹೇಳಿದ್ದಾರೆ.
ಗುಜರಾತ್ ಟೈಟಾನ್ಸ್ ಇತ್ತೀಚೆಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದ್ದು, ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು. ಪ್ರಾಂಚೈಸಿ ಚೊಚ್ಚಲ ಋತುವಿನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿತು. ಹಾರ್ದಿಕ್ ತಂಡದ ನಾಯಕನ ಜೊತೆಗೆ ಆಲ್ ರೌಂಡರ್ ಆಗಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. 44.27 ರ ಸರಾಸರಿಯಲ್ಲಿ 487 ರನ್ ಕಲೆಹಾಕಿ, 7.28 ಎಕಾನಮಿಯಲ್ಲಿ ಎಂಟು ವಿಕೆಟ್ ಗಳನ್ನು ಗಳಿಸಿದ್ದಾರೆ.
ಗುಜರಾತ್ ಟೈಟಾನ್ಸ್ ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದ ಹಾರ್ದಿಕ್ ತನ್ನ ಮುಂದಿನ ಗುರಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಭಾರತಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಲು ಸಹಾಯ ಮಾಡುವುದು ತನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.
“ಎಲ್ಲಾ ಅಡ್ಡಿಗಳನ್ನು ನಿವಾರಿಸಿ ನಾವು ವಿಶ್ವಕಪ್ ಗೆಲ್ಲಲಿದ್ದೇವೆ. ಅದಕ್ಕಾಗಿ ನಾನು ಸಂಪೂರ್ಣ ಸಾಮರ್ಥ್ಯದಿಂದ ಹೋರಾಡಲಿದ್ದೇನೆ. ನಾನು ಪ್ರತಿನಿಧಿಸುವ ತಂಡವು ಯಾವಾಗಲೂ ಮೊದಲ ಸ್ಥಾನದಲ್ಲಿಯೇ ಇರಬೇಕೆಂದು ಬಯಸುತ್ತೇನೆ. ಭಾರತಕ್ಕಾಗಿ ಆಡುವುದು ನನ್ನ ಕನಸು ಮತ್ತು ಅತ್ಯಂತ ಸಂತೋಷ ನೀಡುವ ವಿಚಾರ ಎಂದು ಹೇಳಿದ್ದಾರೆ. ಹಾರ್ದಿಕ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ T20I ಸರಣಿಯಲ್ಲಿ ಆಡಲಿದ್ದಾರೆ.
ಹಾರ್ದಿಕ್ ಪಾಂಡ್ಯ ನಿರ್ಭೀತಿ ಮಾದರಿಯ ನಾಯಕತ್ವ ಶೈಲಿ ಹಲವರನ್ನು ಸೆಳೆದಿದ್ದು ಹಾರ್ದಿಕ್ ಭವಿಷ್ಯದ ನಾಯಕ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ಬಗ್ಗೆ ಧ್ವನಿಗೂಡಿಸಿರುವ ಸುನೀಲ್ ಗವಾಸ್ಕರ್ ಮೊದಲಾದ ಖ್ಯಾತನಾಮರು ಹಾರ್ದಿಕ್ ಗೆ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂಬ ಗುಣಗಾನ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ