ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೆಚ್ಚಾಗಿದೆ.
ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಅಗತ್ಯ ಸೇವೆ ಬಿಟ್ಟು ಇನ್ಯಾವ ಸೇವೆಯೂ ಲಭ್ಯವಾಗುವುದಿಲ್ಲ. ಸುಪ್ರೀಂ ಆದೇಶ ಹೊರಬಂದಾಗಿನಿಂದಲೂ ಮಂಡ್ಯದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ.
ಇಂದು ಕೂಡ ಕಾವೇರಿ ಹೋರಾಟ ಮುಂದುವರಿಯಲಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ರೈತ ಹಿತರಕ್ಷಣಾ ಸಮಿತಿ ಸಾಥ್ ನೀಡಿದೆ. ಇದರ ಜೊತೆಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ನಾಳೆ ನಡೆಯುವ ಬಂದ್ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲಿಯೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ನಾಳೆ ನಡೆಯುವ ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳು ಸಾಥ್ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಲಿದೆ. ಕನ್ನಡ ಪರ ಸಂಘಟನೆಗಳ ಒಕ್ಕೂಟ, ದಲಿತ ಸಂಘಟನೆ, ರೈತ ಸಂಘ, ಹಸಿರು ಸೇನೆ ಪ್ರತಿಭಟನೆಗೆ ಸಾಥ್ ನೀಡಲಿದೆ.
ನಾಳೆ ಕರ್ನಾಟಕ ಬಂದ್ ಆಗಲಿದ್ದು, ಸಾವಿರಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಸಾಥ್ ನೀಡಿವೆ. ನಾಳೆ ನಡೆಯುವ ಬಂದ್ಗೆ ಬೆಂಬಲ ಕೋರಲು ಇಂದು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಸಂಚರಿಸಲಿದ್ದಾರೆ.
ಸಿಡಬ್ಲೂಆರ್ಸಿ ತಮಿಳುನಾಡಿಗೆ ಮತ್ತೆ 18 ದಿನ 3,000 ಕ್ಯುಸೆಕ್ ನೀಡು ಹರಿಸುವಂತೆ ಆದೇಶ ನೀಡಿದ ಬೆನ್ನಲ್ಲೇ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯಾದ್ಯಂತ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಇತ್ತ ರಾಜಕೀಯ ಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ದೂರುತ್ತಿದ್ದರೆ, ಕಾಂಗ್ರೆಸ್ ಪ್ರಧಾನಿ ಮೋದಿ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಿದೆ.