ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪುತ್ರ ಅವರ ಕಾರ್ತಿಚಿದಂಬರಂಗೆ ಮತ್ತೆ ಸಿಬಿಐ ಸಂಕಷ್ಟ ಎದುರಾಗಿದ್ದು 50 ಲಕ್ಷ ಲಂಚ ಪಡೆದು ಚೀನಾ ಕೆಲಸಗಾರರಿಗೆ ಅಕ್ರಮವಾಗಿ ವೀಸಾ ಒದಗಿಸುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರ ಮನೆ ಮತ್ತು ಕಛೇರಿ ಸೇರಿದಂತೆ ಒಟ್ಟೂ ಒಂಭತ್ತು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ತಮಿಳುನಾಡಿನಲ್ಲಿ ಮೂರು, ಮುಂಬೈನಲ್ಲಿ ಮೂರು, ಪಂಜಾಬ್ನಲ್ಲಿ, ಕರ್ನಾಟಕ ಮತ್ತು ಒಡಿಶಾದಲ್ಲಿ ತಲಾ ಒಂದು ಪ್ರದೇಶ ಸೇರಿದಂತೆ ಒಟ್ಟೂ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಪ್ರಕರಣದ ಹಿನ್ನೆಲೆ:
ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ವತಿಯಿಂದ ಪಂಜಾಬ್ ನ ಮಾನ್ಸಾದಲ್ಲಿ 1,980 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಚಿನಾ ಮೂಲದ ಶಾಂಡೊಂಗ್ ಎಲೆಕ್ಟ್ರಿಕ್ ಪವರ್ ಕನ್ಸ್ಟ್ರಕ್ಷನ್ ಕಾರ್ಪ್ (ಸೆಪ್ಕೊ) ಎಂಬ ಕಂಪನಿಗೆ ಹೊರಗುತ್ತಿಗೆ ನೀಡಲಾಯಿತು. ಯೋಜನೆಯನ್ನು ಪ್ರಾರಂಭಿಸಿದ ಕಂಪೆನಿಗೆ ನಿಗದಿತ ಸಮಯದಲ್ಲಿ ಮುಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಹೆಚ್ಚಿನ ಕೆಲಸಗಾರರನ್ನು ಚೀನಾದಿಂದ ಕರೆಸಿಕೊಳ್ಳಲು ಯೋಚಿಸಿತು.
ಗೃಹ ಸಚಿವಾಲಯವು ಕೆಲಸಗಾರರ ಸಂಖ್ಯೆಗೆ ನಿರ್ಬಂಧ ವಿಧಿಸಿದ್ದರಿಂದ ಹಿಂಬಾಗಿಲಿನಿಂದ ಹೆಚ್ಚು ಕೆಲಸಗಾರರನ್ನು ಕರೆಸಿಕೊಳ್ಳಲು ಅದು ಕಾರ್ತಿ ಚಿದಂಬರಂ ಅವರನ್ನು ಸಂಪರ್ಕಿಸಿತು. ಮತ್ತು ಅವರ ಸಹಾಯದಿಂದ ಗೃಹ ಸಚಿವಾಲಯದ ನಿರ್ಬಂಧದ ನಡುವೆಯೇ ಹೆಚ್ಚಿನ ಕೆಲಸಗಾರರಿಗೆ ವೀಸಾ ವಿತರಿಸಲಾಯಿತು. ಕಾರ್ತಿ ಚಿದಂಬರಂ ರವರು ಈ ವಂಚನೆಗೆ ಕುಮ್ಮಕ್ಕು ನೀಡಿದ್ದರಿಂದಲೇ ಕೇವಲ ಒಂದೇ ತಿಂಗಳಿನಲ್ಲಿ ವೀಸಾಗೆ ಅನುಮೋದನೆ ದೊರೆಯಿತು ಎನ್ನಲಾಗಿದೆ. ಹಾಗೂ ಚಾಕು ತಯಾರಿಕಾ ಕಂಪೆನಿಯೊಂದರ ಸುಳ್ಳು ರಸೀದಿಗಳನ್ನು ಸೃಷ್ಟಿಸಿ ಕೋಟಿಗಳ ಮೊತ್ತದಲ್ಲಿ ಹಣ ಪಾವತಿಯಾಗಿದೆ ಎನ್ನಲಾಗಿದೆ.