ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 12 ಮಂದಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಅವರೆಲ್ಲರಿಗೂ ದೇಶ ತೊರೆಯದಂತೆ ನಿರ್ಬಂಧ ವಿಧಿಸಲಾಗಿದೆ. ಅಬಕಾರಿ ನೀತಿ ಅನುಷ್ಠಾನದಲ್ಲಿ ಭ್ರಷ್ಟಾಚಾರ ಆರೋ ಎದುರಿಸುತ್ತಿರುವ ಸಿಸೋಡಿಯಾ ಮನೆಯಲ್ಲಿ ಕೇಂದ್ರ ತನಿಖಾ ತಂಡದ (ಸಿಬಿಐ) ಅಧಿಕಾರಿಗಳು ಶೋಧ ನಡೆಸಿರುವುದು ಗೊತ್ತೇ ಇದೆ. ಮನೆ ಅಷ್ಟೇ ಅಲ್ಲದೆ ಸಿಬಿಐ ಅಧಿಕಾರಿಗಳು 30 ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಒಟ್ಟು 15 ಮಂದಿಯನ್ನು ಹೆಸರಿಸಲಾಗಿದೆ.
ಈ ಪೈಕಿ ಸಿಸೋಡಿಯಾ ಸೇರಿ 13 ಮಂದಿಗೆ ಇಂದು ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ವಿರೋಧ ಪಕ್ಷಗಳನ್ನು ಹೆದರಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳೊಂದಿಗೆ ದಾಳಿ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಮದ್ಯ ನೀತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿ ಸಿಎಂ ಕೇಜ್ರಿವಾಲ್ ಅವರನ್ನು ಮಣಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತನ್ನನ್ನು ಇನ್ನು ಮೂರು-ನಾಲ್ಕು ದಿನಗಳಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ದೆಹಲಿ ಸರ್ಕಾರವು ಈಗಾಗಲೇ ಹೊಸ ಮದ್ಯ ನೀತಿಯನ್ನು ರದ್ದುಗೊಳಿಸಿ, ಹಳೆಯ ನೀತಿಯನ್ನು ಮರಳಿ ತಂದಿದೆ.