ಹೊಸದಿಗಂತ ವರದಿ,ಕೆ.ಆರ್.ಪೇಟೆ :
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕೋವಿಡ್ ಮಹಾಮಾರಿಯ ರುದ್ರನರ್ತನ ಮುಂದುವರೆದಿದ್ದು, ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಪ್ರಾಧ್ಯಾಪಕರಿಗೆ ಕೋವಿಡ್ ಸೋಂಕು ತಗುಲಿರುವುದು ಧೃಡಪಟ್ಟಿದೆ.
ಕೊರೋನಾ ಪಾಸಿಟಿವ್ ಸೋಂಕು ಖಚಿತವಾಗಿರುವ ವಿದ್ಯಾರ್ಥಿಗಳನ್ನು ಸಾರಂಗಿ ಗ್ರಾಮದಲ್ಲಿ ತಾಲೂಕು ಆಡಳಿತವು ಸ್ಥಾಪಿಸಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್ಗೆ ಹಾಗೂ ಕೆಲವು ವಿದ್ಯಾರ್ಥಿಗಳನ್ನು ಹೋಂ ಐಸೊಲೇಷನ್ ನಲ್ಲಿ ಇರಿಸಲಾಗಿದ್ದು ಆರೋಗ್ಯ ಸಂವರ್ಧನೆಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ರ್ಆ.ದಿನೇಶ್ ತಿಳಿಸಿದರು.
ತಹಶೀಲ್ದಾರ್ ಎಂ.ವಿ.ರೂಪ, ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರವಿಕುಮಾರ್ ಮತ್ತು ಪಟ್ಟಣ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಮುಂದಾಗಿದ್ದಾರೆ.
700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೋವಿಡ್ ಸೋಂಕು ಉಲ್ಬಣಿಸುತ್ತಿರುವುದು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂಧಿಗಳಲ್ಲಿ ಆತಂಕ ಉಂಟುಮಾಡಿದೆ. ಪುರಸಭೆಯ ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ ಮತ್ತು ಪೌರಕಾರ್ಮಿಕರ ನೇತೃತ್ವದಲ್ಲಿ ಎಂಜಿನಿಯರಿಂಗ್ ಕಾಲೇಜು ಕೊಠಡಿಗಳು ಹಾಗೂ ಕಾಲೇಜಿನ ಆವರಣವನ್ನು ಸ್ಯಾನಿಟೈಜೇಷನ್ ಮಾಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.