ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ನಿನ್ನೆ ರಾತ್ರಿ ಬಿಡುಗಡೆ ಮಾಡಿದೆ.
ಮೂರು ಪಟ್ಟಿಯಲ್ಲಿಯೂ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸುಳಿವೇ ಇರಲಿಲ್ಲ, ಇನ್ನು ಈಗಷ್ಟೇ ರಾಜಕೀಯ ನಿವೃತ್ತಿ ಘೋಷಿಸಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಮಗ ಕಾಂತೇಶ್ಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.
ಇದೀಗ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್ ನೀಡಿದ್ದು, ಈ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ. ಮಗನಿಗೆ ಟಿಕೆಟ್ ಸಿಗದಿದ್ದರೂ ಸ್ಪೋರ್ಟ್ಸ್ಮ್ಯಾನ್ಶಿಪ್ ತೋರಿರುವ ಈಶ್ವರಪ್ಪ. ಚನ್ನಬಸಪ್ಪಗೆ ಟಿಕೆಟ್ ಸಿಕ್ಕಿದ್ದಕ್ಕೆ ಬೇಸರ ಇಲ್ಲ, ಅವರು ನಿಷ್ಠಾವಂತ ನಾಯಕ. ಹೈಕಮಾಂಡ್ ಉತ್ತಮ ನಿರ್ಧಾರೆ ತೆಗೆದುಕೊಂಡಿದೆ. ಚನ್ನಬಸಪ್ಪ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾಂತೇಶ್ ಕೂಡ ಈ ಬಗ್ಗೆ ಮಾತನಾಡಿದ್ದು, ಟಿಕೆಟ್ ಸಿಗದ್ದಕ್ಕೆ ಬೇಸರ ಇದೆ, ನನ್ನ ಅಭಿಮಾನಿಗಳಿಗೆ ನೋವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ಆದರೆ ನನ್ನ ತಂದೆಯ ಪಕ್ಷ ಬಿಜೆಪಿ, ಅವರಿಗೆ ಎಲ್ಲ ರೀತಿಯ ಸ್ಥಾನಮಾನ ಕೊಟ್ಟಿದ್ದು ಬಿಜೆಪಿ ಹಾಗಾಗಿ ಇಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.