ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ತಿಂಗಳ ಸುದೀರ್ಘ ವಿರಾಮದ ನಂತರ ಇದೀಗ ಚಾರ್ಧಾಮ್ ಯಾತ್ರೆ ಮತ್ತೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಹಿಂದೂಯೇತರರಿಗೆ ಪ್ರವೇಶ ಇಲ್ಲದಂತಾಗಿದೆ.
ಗಂಗೋತ್ರಿ ಮತ್ತು ಯಮುನೋತ್ರಿ ದ್ವಾರಗಳು ತೆರೆದಿದ್ದು, ಭಕ್ತರು ದೇವರ ದರುಶನಕ್ಕಾಗಿ ಕಾದು ಕುಳಿತಿದ್ದಾರೆ.
ಉತ್ತರಕಾಶಿ ಜಿಲ್ಲೆಯ ಎರಡೂ ದೇವಾಲಯಗಳಲ್ಲಿ ಮೊದಲ ಪ್ರಾರ್ಥನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಸಲ್ಲಿಸಲಾಯಿತು. ಈ ಬಾರಿ ಹಸಿರು ಹಾಗೂ ಸ್ವಚ್ಛ ಯಾತ್ರೆಗೆ ಮಣೆ ಹಾಕಿದ್ದು, ಎಲ್ಲರೂ ಇದನ್ನು ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.
ಸನಾತನಿಗಳು ಅಲ್ಲದವರು ದೇಗುಲದ ಒಳಗೆ ಬರಲೇಬೇಕು ಎನ್ನುವುದಾದರೆ ಗೋಮೂತ್ರ, ಸಗಣಿ, ಹಾಲು, ಮೊಸರು ಹಾಗೂ ತುಪ್ಪದ ಮಿಶ್ರಣವಾದ ಪಂಚಗವ್ಯವನ್ನು ಸೇವನೆ ಮಾಡಬೇಕಿದೆ. ಹಿಂದೂಯೇತರರು ತಮ್ಮ ಪ್ರವೇಶಕ್ಕಾಗಿ ಸನಾತನ ಧರ್ಮದಲ್ಲಿ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್ ಅನ್ನು ಸಲ್ಲಿಸುವುದನ್ನು ಕಡ್ಡಾಯ ಎಂದು ಶ್ರೀ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ ತಿಳಿಸಿದೆ. ಆದರೆ ಯಮುನೋತ್ರಿಗೆ ಎಲ್ಲ ಭಕ್ತರಿಗೆ ಮುಕ್ತ ಸ್ವಾಗತವಿದೆ.
ಇನ್ನು ಕೇದರನಾಥ ಹಾಗೂ ಬದರಿನಾಥದ ದ್ವಾರಗಳು ಏಪ್ರಿಲ್ 22 ಮತ್ತು ಏಪ್ರಿಲ್ 23 ರಂದು ತೆರೆಯಲಿವೆ.



