ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ದೈವಜ್ಞ ಶ್ರೀಗಳ ಚಾತುರ್ಮಾಸ್ಯ ಸಂಪನ್ನ

ಹೊಸದಿಗಂತ ವರದಿ  ಹೊನ್ನಾವರ :

ಶ್ರೀ ಕ್ಷೇತ್ರ ಕರ್ಕಿಯ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ 37ನೇ ಚಾತುರ್ಮಾಸ್ಯ ವ್ರತಾಚರಣೆಯು ಪ್ರಪ್ರಥಮ ಬಾರಿಗೆ ಶ್ರೀ ದತ್ತಾತ್ರೇಯ ಕ್ಷೇತ್ರವಾದ ಕಲಬುರ್ಗಿ ಜಿಲ್ಲೆಯ ದೇವಲ ಗಾಣಗಾಪುರದ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ಮಠದಲ್ಲಿ ಆಷಾಢ ಪೂರ್ಣಿಮೆಯ ಜುಲೈ.13 ರಂದು ವ್ಯಾಸ ಪೂಜೆಯೊಂದಿಗೆ ಪ್ರಾರಂಭಗೊಂಡು ಎರಡು ತಿಂಗಳುಗಳ ಕಾಲ ನಡೆದು ಭಾದ್ರಪದ ಪೂರ್ಣಿಮೆಯ ಸೆ.10 ರಂದು ಶನಿವಾರ ಸೀಮೋಲ್ಲಂಘನದೊಂದಿಗೆ ಸಂಪನ್ನಗೊಂಡಿತು.

ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿದ್ದು ಜಗತ್ತಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ ಎಂದು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮೀಜಿ ಹೇಳಿದರು.
ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಅಂಬಾ ಭವಾನಿ, ಶ್ರೀ ಎಲ್ಲಮ್ಮ ದೇವಿ ದೇವಾಲಯದ ಸಭಾಂಗಣದಲ್ಲಿ, ತಮ್ಮ 37ನೆಯ ಚಾತುರ್ಮಾಸ್ಯ ಕಾರ್ಯಕ್ರಮದ ಸೀಮೋಲ್ಲಂಘನ ಕಾರ್ಯಕ್ರಮದ ನಂತರ ಭಕ್ತಾದಿಗಳನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ಚಾತುರ್ಮಾಸ್ಯ ವೃಥಾಚಾರಣೆ ಸಂದರ್ಭದಲ್ಲಿ ಸನ್ಯಾಸಿಗಳು ಎರಡು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿದ್ದು ಎಲ್ಲಿಯೂ ಸಂಚರಿಸದೆ ಭಕ್ತರಿಗೆ ದರ್ಶನ ನೀಡುತ್ತಾರೆ.

ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ,ವಿಶೇಷ ಪರಂಪರೆಯನ್ನು ಹೊಂದಿದೆ. ಎರಡು ತಿಂಗಳುಗಳ ಕಾಲ ಶ್ರೀ ದತ್ತಾತ್ರೇಯ ಕ್ಷೇತ್ರ ದೇವಲ ಗಾಣಗಾಪುರದ ಶ್ರೀಶಂಕರ ಮಠದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ, ಅನೇಕ ಊರುಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಗುರುಪೂಜೆ ಮೂಲಕ ಚಾತುರ್ಮಾಸ್ಯ ಮುಕ್ತಾಯವಾಗಿದೆ ಎಂದರು. ಶ್ರೀ ದೇವಲ ಗಾಣಗಾಪುರದಲ್ಲಿ ದತ್ತ ಪೂಜೆಯನ್ನು ಶ್ರೀ ಶಂಕರಮಠದಲ್ಲಿ ನೇರವೆರಿಸಿ ಪಾಲಕಿಯನ್ನು ಶ್ರೀ ದತ್ತ ಮಂದಿರ ತನಕ ತೆಗೆದು ಕೊಂಡು ಹೋಗಿ ಮರಳಿ ಶ್ರೀ ಶಂಕರ ಮಠಕ್ಕೆ ತರಲಾಯಿತು. ಶ್ರೀಗಳ ನೇತೃತ್ವದಲ್ಲಿ ದಿಗಂಬರ ದಿಗಂಬರ ದಿಗಂಬರ ಶಬ್ದ ಎಲ್ಲ ರಸ್ತೆಗಳಲ್ಲಿ ರಿಂಗಣಿಸಿತು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಜಾನನ ವೆರ್ಣೇಕರ್, ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಕಾರ್ಯಧ್ಯಕ್ಷರಾದ ಆರ್.ಎಸ್.ರಾಯ್ಕರ್, ಶ್ರೀಮಠದ ಟ್ರಸ್ಟಿಗಳಾದ ಅರುಣ್ ಕುಮಾರ್ ಸಾಗರ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು, ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ, ವಿಮಾನ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಬೆಂಗಳೂರು ದೈವಜ್ಞ ಯುವಕ ಸಂಘದ ಅಧ್ಯಕ್ಷ ಮಹೇಶ್ ಜಿ ಶೇಟ್, ಪಶ್ಚಿಮ ಸಂಘದ ಅಧ್ಯಕ್ಷ ದೀಪಕ್ ಶೇಟ್, ಗುರು ಪೀಠ ಸೇವಾ ಸಮಿತಿಯ ಸುರೇಶ್ ಶೇಟ್, ಮಂಗಳೂರು ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ್ ಶೇಟ್, ರಾಜೇಂದ್ರಕಾಂತ ಶೇಟ್, ನಾಗರಾಜ್ ಶೇಟ್ ಸೇರಿದಂತೆ ಕಲ್ಬುರ್ಗಿ ದೈವಜ್ಞ ಸಮಾಜದ ಮಾತೆಯರು, ಜಿಲ್ಲೆಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಜಗತ್ ಸರ್ಕಲ್ ನಿಂದ ಶ್ರೀಗಳವರನ್ನು ಮೆರವಣಿಗೆ ಮೂಲಕ ಪೂರ್ಣ ಕುಂಭ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಮತಿ ವನಿತಾ ವಿನಯ್ ವರ್ಣೇಕರ್ ಪ್ರಾರ್ಥಿಸಿದರು. ದೈವಜ್ಞ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಶೀಗಳವರ ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಭಾಗಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!