ಚಿರಂಜೀವಿಗೆ ʼಕಪೂರ್‌ʼ ಗಳಂತಾಗಬೇಕಂತೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್‌ ಮೆಗಾಸ್ಟಾರ್ ಚಿರಂಜಿವಿ ತಮ್ಮ ಕುಟುಂಬವು ಬಾಲಿವುಡ್ ನ ʼಕಪೂರ್‌ʼ ಕುಟುಂಬದಂತೆ ಜನಪ್ರಿಯತೆ ಪಡೆಯ ಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಮುಂದಿನ ಚಿತ್ರ ʼಆಚಾರ್ಯʼದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರ ಈ ಆಸೆಯ ಕುರಿತಾಗಿ ಹೇಳಿದ್ದಾರೆ.

“ಬಾಲಿವುಡ್‌ನ ಕಪೂರ್‌ ಕುಟುಂಬದ ಜನಪ್ರಿಯತೆಯಿಂದ ನಾನು ಯಾವಾಗಲೂ ಆಕರ್ಷಿತನಾಗಿದ್ದೆ, ಮುಂಚಿನಿಂದಲೂ ಹಿಂದಿ ಚಿತ್ರರಂಗದಲ್ಲಿ ಕಪೂರ್ ಕ್ರೇಜ್ ಇದೆ. ಸೌತ್ ಸಿನಿಮಾದಲ್ಲಿ ನಮ್ಮ ಫ್ಯಾಮಿಲಿ ಕೂಡ ಹಾಗೆ ಆಗಲಿ ಅಂತ ಹಾರೈಸಿದ್ದೆ. ಈ ಮಕ್ಕಳು (ಪವನ್ ಕಲ್ಯಾಣ್‌ನಿಂದ ಅಲ್ಲು ಅರ್ಜುನ್ ಮತ್ತು ಇತರರು) ಹೇಗೆ ಬೆಳೆದು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂಬುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿರುವ ಅವರು ತಮ್ಮ ಈ ಬಯಕೆಯನ್ನು ತಮ್ಮ ಪವನ್‌ ಕಲ್ಯಾಣ್‌ ಅವರೊಂದಿಗೆ ಹಂಚಿಕೊಂಡಿರುವ ಕುರಿತು ಬಹಿರಂಗ ಪಡಿಸಿದ್ದಾರೆ.

“ಸೌತ್‌ ಸಿನಿಮಾಗಳೆಂದರೆ ಈ ಹಿಂದೆ ಅನೇಕರು ಮೂಗು ಮುರಿಯುತ್ತಿದ್ದರು. ನಾನೂ ಕೂಡ ಒಮ್ಮೆಇಂಥ ಅವಮಾನವನ್ನು ಅನುಭವಿಸಿದ್ದೆ, ನನ್ನ ಚಿತ್ರ ರುದ್ರವೀಣೆಗೆ ಪ್ರಶಸ್ತಿ ಸ್ವೀಕರಿಸಲು ಹೋದಾಗ ಅಲ್ಲಿ ಹೈ ಟೀ ಫಂಕ್ಷನ್‌ ನಲ್ಲಿ ಭಾಗವಹಿಸಿದ್ದೆ, ನನ್ನ ಹಿಂದಿರುವ ಗೋಡೆಯ ಮೇಲೆ ಭಾರತೀಯ ಚಿತ್ರರಂಗದ ಇತಿಹಾಸವನ್ನು ವಿವರಿಸುವ ಚಿತ್ರ ಹಾಕಲಾಗಿತ್ತು, ಆದರೆ ಅದರಲ್ಲಿ ದಕ್ಷಿಣ ಭಾರತದ ನಟರ ಕುರಿತಾಗಿ ಅತೀ ಕಡಿಮೆ ಉಲ್ಲೇಖವಿತ್ತು. ಇದು ನನಗೆ ಮುಜುಗರ ಉಂಟು ಮಾಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಸೌತ್‌ ಸಿನೆಮಾಗಳು ಪ್ರಾದೇಶಿಕತೆಯ ಚೌಕಟ್ಟನ್ನು ಮೀರಿ ಹಿಟ್‌ ಆಗುತ್ತಿರುವ ಕುರಿತು ಹೆಮ್ಮೆಯಾಗುತ್ತದೆ” ಎಂದು ಚಿರಂಜೀವಿ ಹೇಳಿಕೊಂಡಿದ್ದಾರೆ.

ಅಂದ ಹಾಗೆ ಆಚಾರ್ಯ ಚಿತ್ರವು ಶುಕ್ರವಾರ ರಿಲೀಸ್‌ ಆಗುತ್ತಿದ್ದು ರಾಮ್‌ ಚರಣ್‌ ಮತ್ತು ಪೂಜಾ ಹೆಗ್ಡೆ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕೊರಟಾಲಶಿವ ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!