ರಾಮಮಂದಿರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕ್ರಿಶ್ಚಿಯನ್ ಮಿಷನರಿ ಗುಂಪು: ವೀಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್
ಹೈದರಾಬಾದ್: ಕ್ರಿಶ್ಚಿಯನ್ ಮಿಷನರಿ ಗುಂಪುಗಳು ಆಂಧ್ರಪ್ರದೇಶದ ಗಂಗಾವರಂನಲ್ಲಿರುವ ಹಿಂದು ದೇವಾಲಯವನ್ನು ಆಕ್ರಮಿಸಿಕೊಂಡಿರುವ ಮತ್ತು ದೇವಾಲಯದ ಆವರಣದಲ್ಲಿ ಸಭೆ ನಡೆಸುತ್ತಿರುವ ವೀಡಿಯೋ ಶುಕ್ರವಾರ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದ ಬಿಜೆಪಿ ಘಟಕದ ಉಸ್ತುವಾರಿಯೂ ಆಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧರ್ ಅವರು ಗಂಗಾವರಂ ಸಮೀಪದ ಹಳ್ಳಿಯೊಂದರ ರಾಮಮಂದಿರದಲ್ಲಿ ಪಾದ್ರಿಯ ನೇತೃತ್ವದಲ್ಲಿ ಕ್ರಿಶ್ಚಿಯನ್ ಗುಂಪು ಸ್ತೋತ್ರಗಳು ಮತ್ತು ಪ್ರಾರ್ಥನಾ ಗೀತೆ ಹಾಡುವ ವೀಡಿಯೋವನ್ನು ಹಾಕಿದ್ದಾರೆ.

ವೀಡಿಯೋದಲ್ಲಿ ಬಿಳಿಯ ಫ್ರಾಕ್ ತೊಟ್ಟ ಪಾದ್ರಿಯೊಬ್ಬರು ರಾಮಮಂದಿರದೊಳಗೆ ಕುಳಿತು ತಮ್ಮ ಅನುಯಾಯಿಗಳೊಂದಿಗೆ ಸ್ತುತಿಗೀತೆಗಳನ್ನು ಹಾಡುತ್ತಿರುವುದು ಕಂಡುಬಂದಿದೆ. ಪಾದ್ರಿಯ ಹಿಂದೆ, ರಾಮಮಂದಿರದ ಗರ್ಭಗುಡಿ ಸ್ಪಷ್ಟವಾಗಿ ಗೋಚರಿಸುತ್ತದೆ, ಕ್ರಿಶ್ಚಿಯನ್ನರು ತಮ್ಮ ಪ್ರಾರ್ಥನೆಗಳನ್ನು ಕೈಗೊಳ್ಳಲು ಹಿಂದು ದೇವಾಲಯವನ್ನು ಪ್ರವೇಶಿಸಿದ್ದಾರೆ ಎಂದು ಸೂಚಿಸುತ್ತದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ರಾಜ್ಯದಲ್ಲಿ ಮತಾಂತರ ಕಾರ್ಯಸೂಚಿಯನ್ನು ಮುಂದಿಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ರಾಮಮಂದಿರವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಮೂಲಕ ಮತ್ತು ಹಿಂದು ದೇವಾಲಯದೊಳಗೆ ಕ್ರಿಶ್ಚಿಯನ್ ಆಚರಣೆಗಳನ್ನು ಮಾಡುವ ಮೂಲಕ ಚರ್ಚ್ ಮಿತಿಗಳನ್ನು ಮೀರಿದೆ. ದೇವಸ್ಥಾನದ ಆವರಣಕ್ಕೆ ನುಗ್ಗಿದ ಅನ್ಯ ಮತೀಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸುನೀಲ್ ಒತ್ತಾಯಿಸಿದ್ದಾರೆ.

ಘಟನೆಯ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿಯ ಹಿರಿಯ ನಾಯಕ ವಿಷ್ಣುವರ್ಧನ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಹಿಂದುಗಳಿಗೆ ಜಾಗವಿಲ್ಲ ಎಂದಿದ್ದಾರೆ. ಗಂಗಾವರಂನಲ್ಲಿರುವ ರಾಮ ಮಂದಿರವನ್ನು ಪಾದ್ರಿಯೊಬ್ಬರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಮತ್ತು ದೇವಾಲಯದೊಳಗೆ ಕ್ರಿಶ್ಚಿಯನ್ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವೈಎಸ್‌ಆರ್-ಕಾಂಗ್ರೆಸ್ ಸರಕಾರದ ಓಲೈಕೆ ರಾಜಕಾರಣದಿಂದ ಈ ರೀತಿ ಆಗುತ್ತಿದೆ ಎಂದಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!