ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗಕ್ಕೂ ಮತ್ತು ರಾಜಕೀಯಕ್ಕೂ ಮೊದಲಿನಿಂದಲೂ ಒಂಥರಾ ಅವಿನಾಭಾವ ನಂಟಿದೆ. ಈ ಹಿಂದೆ ಕರ್ನಾಟಕದ ‘ರೆಬೆಲ್ ಸ್ಟಾರ್’ ಅಂಬರೀಷ್ ಕಾಂಗ್ರೆಸ್ ಸೇರಿ ಕೇಂದ್ರ ಮಂತ್ರಿಯಾಗಿದ್ದರೆ, ಅನಂತ್ ನಾಗ್ ಜನತಾದಳದಿಂದ ರಾಜ್ಯದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇನ್ನು ನೆರೆಯ ಆಂಧ್ರಪ್ರದೇಶದಲ್ಲಿ ಎನ್.ಟಿ. ರಾಮರಾವ್ ಅವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿದ್ದರೆ, ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ತೀರಾ ಇತ್ತೀಚೆಗೆ ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಆಂಧ್ರದ ಉಪಮುಖ್ಯಮಂತ್ರಿಯಾಗಿದ್ದರೆ, ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ರಾಜಕೀಯ ಪಕ್ಷ ಕಟ್ಟಿ ಅಧಿಕಾರ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ‘ಪುಷ್ಪ’ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಶೀಘ್ರದಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಗುಸುಗುಸು ಸುದ್ದಿ ಈಗ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೊಸ ಪಕ್ಷದ ಸಾಧ್ಯತೆ?:
ದಳಪತಿ ವಿಜಯ್ ಹಾದಿಯಲ್ಲೇ ಅಲ್ಲು ಅರ್ಜುನ್ ಹೊಸ ಪಕ್ಷ ಕಟ್ಟುತ್ತಾರಾ ಅಥವಾ ತಮ್ಮ ಮಾವ ಪವನ್ ಕಲ್ಯಾಣ್ ಅವರ ‘ಜನಸೇನಾ’ ಪಕ್ಷವನ್ನು ಬೆಂಬಲಿಸುತ್ತಾರೋ ಎಂಬ ಕುತೂಹಲ ಮೂಡಿದೆ. ಕಳೆದ ಚುನಾವಣೆಯಲ್ಲಿ ತಮ್ಮ ಆಪ್ತ ಸ್ನೇಹಿತ ಹಾಗೂ ವೈಎಸ್ಆರ್ಸಿಪಿ ಅಭ್ಯರ್ಥಿ ಶಿಲ್ಪಾ ರವಿ ರೆಡ್ಡಿ ಪರ ನಟ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದು ಅವರದೇ ಮೆಗಾ ಕುಟುಂಬದ ಒಳಗೆ ದೊಡ್ಡ ಸದ್ದು ಮಾಡಿತ್ತು.
ಇದನ್ನೂ ಓದಿ:
ಅಭಿಮಾನಿ ಬಳಗದ ಶಕ್ತಿ:
‘ಪುಷ್ಪ-2’ ಚಿತ್ರದ ಭಾರಿ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಜನಪ್ರಿಯತೆ ದೇಶಾದ್ಯಂತ ಹೆಚ್ಚಾಗಿದ್ದು, ಇದನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲು ಪ್ರಮುಖ ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿವೆ ಎನ್ನಲಾಗಿದೆ.



