ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಅಜ್ಮೀರ್ ದರ್ಗಾದ ಧರ್ಮಗುರುಗಳ ಹೇಳಿಕೆಯು ದರ್ಗಾದ ಭಕ್ತಾದಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದ್ದು ದರ್ಗಾಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ವ್ಯಾಪಕ ಕುಸಿತವಾಗಿದೆ. ಇದು ದರ್ಗಾದ ಅಕ್ಕಪಕ್ಕದಲ್ಲಿರುವ ಸ್ಥಳೀಯ ಮಾರಾಟಗಾರರು ಮತ್ತು ಹೋಟೆಲ್ಗಳ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಧರ್ನಗುರುಗಳ ವಿವಾದಿತ ವೀಡಿಯೊಗಳು ಮತ್ತು ಧರ್ಮಗುರುಗಳ ಹೇಳಿಕೆಗಳು ಈದ್ ಹಬ್ಬದ ತುರುಸಿನ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
ಸ್ತಳೀಯ ಮಾರಾಟಗಾರರು ಶೇ.90ರಷ್ಟು ನಷ್ಟವನ್ನು ಎದುರಿಸಿದ್ದಾರೆ ಮತ್ತು ಅಜ್ಮೀರ್ ದರ್ಗಾ ಬಳಿ ಹೋಟೆಲ್ ಬುಕಿಂಗ್ ಅನ್ನು ಸಹ ರದ್ದುಗೊಳಿಸಲಾಗಿದೆ. ಶುಕ್ರವಾರ ಜುಮ್ಮಾ ಆಗಿದ್ದರೂ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದ ಅಜ್ಮೀರ್ನ ಓಣಿಗಳು, ಗಲ್ಲಿಗಳು ದರ್ಗಾದ ಬೀದಿಗಳು ನಿರ್ಜನವಾಗಿ ಕಾಣಿಸಿದವು. ಖ್ವಾಜಾ ಗರೀಬ್ ನವಾಜ್ ನ ಧರ್ಮಗುರುಗಳು ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ಇಲ್ಲಿಗೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಈ ಕಾರಣದಿಂದಾಗಿ ಜನರ ಆದಾಯದ ಮೇಲೂ ಪರಿಣಾಮ ಬೀರಿದೆ ಮತ್ತು ಕಳೆದ ಕೆಲವು ದಿನಗಳಲ್ಲಿ ರೆಸ್ಟೋರೆಂಟ್ ಮತ್ತು ಸಾರಿಗೆ ಕೇವಲ 10 ಪ್ರತಿಶತದಷ್ಟು ವ್ಯಾಪಾರವನ್ನು ಮಾಡಿದೆ. ಇಷ್ಟು ಮಾತ್ರವಲ್ಲದೆ, ದರ್ಗಾ ಬಜಾರ್, ದೆಹಲಿ ಗೇಟ್, ಡಿಗ್ಗಿ ಬಜಾರ್ನಲ್ಲಿರುವ ಹೋಟೆಲ್ಗಳು ಮತ್ತು ಖಾದಿಮ್ ಮೊಹಲ್ಲಾ, ಕಮ್ಮನಿ ಗೇಟ್, ಅಂದರ್ ಕೋಟೆ ಮತ್ತು ಲಖನ್ ಕೊಟ್ರಿಯ ಅತಿಥಿ ಗೃಹಗಳು ಪ್ರತಿದಿನ ಭಾರಿ ನಷ್ಟವನ್ನು ಅನುಭವಿಸುತ್ತಿವೆ ಏಕೆಂದರೆ ಅನೇಕ ಜನರು ತಮ್ಮ ಮುಂಗಡ ಹೋಟೆಲ್ ಬುಕಿಂಗ್ ಅನ್ನು ಸಹ ರದ್ದುಗೊಳಿಸಿದ್ದಾರೆ.
“ಹಿಂದೆ ನಮ್ಮ ಮಾರಾಟವು ಈಗಿರುವುದಕ್ಕಿಂತ ಹೆಚ್ಚಾಗಿತ್ತು. ಈಗ ಇಲ್ಲಿನ ಎಲ್ಲಾ ಮಾರಾಟಗಾರರು ಒಂದು ರೀತಿಯ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದಾರೆ. ಜನರು ಭಯಭೀತರಾಗಿ ಹೊರಗೆ ಬರುತ್ತಿಲ್ಲ” ಎಂದು ಸ್ಥಳೀಯ ವ್ಯಾಪರಿಯೊಬ್ಬರು ಸುದ್ದಿ ಸಂಸ್ಥೆ ಏಎನ್ಐ ಗೆ ತಿಳಿಸಿವೆ. “ನಮ್ಮಲ್ಲಿ ಹೋಟೆಲ್ ಇದೆ. ಕಳೆದ ವರ್ಷ ನಮ್ಮ ಮಾರಾಟವು ಉತ್ತಮವಾಗಿತ್ತು ಆದರೆ ಉದಯಪುರದಲ್ಲಿ ಹೇಳಿಕೆಗಳು ಮತ್ತು ಸಮಸ್ಯೆಗಳು ಬೆಳೆದಂತೆ, ಇದು ಮಾರಾಟದ ಸಂಪೂರ್ಣ ನಷ್ಟಕ್ಕೆ ಕಾರಣವಾಯಿತು. ನಮ್ಮ ಎಲ್ಲಾ ಕೊಠಡಿಗಳು ಪ್ರಸ್ತುತ ಖಾಲಿ ಇವೆ, ಅವರ ಆಗಮನದ ಮೊದಲು ಬುಕ್ ಮಾಡಿದವರು ರದ್ದುಗೊಳಿಸಿದ್ದಾರೆ, ”ಎಂದು ಹೋಟೆಲ್ ಮಾಲೀಕರು ಹೇಳಿದರು.ಅಜ್ಮೀರ್ಗೆ ಬರುವ ಜನರ ಮೇಲೆ ದ್ವೇಷದ ಹೇಳಿಕೆಗಳು ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸಿವೆ ಎಂದು ಜನ್ನತ್ ಗ್ರೂಪ್ ಆಫ್ ಹೋಟೆಲ್ಗಳ ಮಾಲೀಕ ರಿಯಾಜ್ ಖಾನ್ ಹೇಳುತ್ತಾರೆ.
ಕನಿಷ್ಠ 50 ಕೋಟಿ ರೂ.ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಖಾಸಗಿ ವಾಹನಗಳ ಬಗ್ಗೆ ಮರೆತುಬಿಡಿ, ಬಸ್ಗಳು ಸಹ ಖಾಲಿಯಾಗಿ ಇಲ್ಲಿಗೆ ಬರುತ್ತಿವೆ’ ಎಂದು ದರ್ಗಾ ಬಜಾರ್ ವ್ಯಾಪಾರ ಸಂಘದ ಅಧ್ಯಕ್ಷ ಹೊಚ್ಚಂದ ಶ್ರೀನಾನಿ ಹೇಳಿದರು.
ಏತನ್ಮಧ್ಯೆ, ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಅಜ್ಮೀರ್ ದರ್ಗಾದ ಧರ್ಮಗುರುವನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.