ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದಿನಿಂದ ಎರಡು ದಿನಗಳ ಕಾಲ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಭಾರತ-ಜಪಾನ್ ನಡುವಿನ ಸಹಕಾರದ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ. ಈ ಪಾಲುದಾರಿಕೆ ಇಂಡೋ-ಪೆಸಿಫಿಕ್ ರಕ್ಷಣೆಗೆ ಭಾರತ-ಜಪಾನ್ ಸಹಕಾರ ಆಧಾರಸ್ತಂಭ ಎಂದು ಬಿಂಬಿಸಿದ್ದಾರೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಇಂದು ಟೋಕಿಯೊಗೆ ಆಗಮಿಸಿದರು. ಅವರ ಭೇಟಿಯು ಕ್ವಾಡ್ ಶೃಂಗಸಭೆ, ಸಹವರ್ತಿ ಕ್ವಾಡ್ ನಾಯಕರನ್ನು ಭೇಟಿ ಮಾಡುವುದು, ಜಪಾನಿನ ವ್ಯಾಪಾರ ಮುಖಂಡರು ಮತ್ತು ಭಾರತೀಯ ವಲಸಿಗರೊಂದಿಗೆ ಸಂವಾದವನ್ನು ಒಳಗೊಂಡಿದೆ. ಪ್ರಧಾನಿ ತಂಗಲಿರುವ ಹೋಟೆಲ್ ನ್ಯೂ ಒಟಾನಿಯಲ್ಲಿ ನೆಲೆಸಿರುವ ಭಾರತೀಯರಿಂದ ಪ್ರಧಾನಿಯವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿಯವರು ʻಜಪಾನ್ನ ಭಾರತೀಯ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಗಳನ್ನು ನೀಡಿದೆ. ಆತ್ಮೀಯವಾಗಿ ಸ್ವಾಗತಿಸಿದ್ದಕ್ಕಾಗಿ ಜಪಾನ್ನಲ್ಲಿರುವ ಭಾರತೀಯ ವಲಸಿಗರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆʼ ಎಂದಿದ್ದಾರೆ.
“ಕೋವಿಡ್ ನಂತರದ ಜಗತ್ತಿಗೆ ಭಾರತ-ಜಪಾನ್ ಸಹಕಾರವು ಅತ್ಯಗತ್ಯವಾಗಿದೆ. ನಮ್ಮ ರಾಷ್ಟ್ರಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿವೆ. ನಾವು ನಿಕಟವಾಗಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಅಷ್ಟೇ ಸಂತೋಷವಾಗಿದೆ. ನಾನು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗಿನಿಂದ ಜಪಾನಿನ ಜನರೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಹೊಂದಿದ್ದೇನೆ ಎಂದು ಪ್ರಧಾನಿ ನೆನಪಿಸಿಕೊಂಡರು. ಜಪಾನ್ನ ಅಭಿವೃದ್ಧಿಯ ದಾಪುಗಾಲು ಯಾವಾಗಲೂ ಶ್ಲಾಘನೀಯವಾಗಿದೆ. ಮೂಲಸೌಕರ್ಯ, ತಂತ್ರಜ್ಞಾನ, ನಾವೀನ್ಯತೆ, ಸ್ಟಾರ್ಟ್-ಅಪ್ಗಳು ಪ್ರಮುಖ ಕ್ಷೇತ್ರಗಳಲ್ಲಿ ಜಪಾನ್ ಭಾರತದೊಂದಿಗೆ ಪಾಲುದಾರಿಕೆ ಹೊಂದಿದೆ. ನಮ್ಮದು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಪಾಲುದಾರಿಕೆಯಾಗಿದೆ. 70 ವರ್ಷಗಳ ನಮ್ಮ ಸ್ನೇಹ ಸಂಬಂಧದ ಪ್ರಯಾಣವನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ” ಎಂದರು.
ಇದು ಕ್ವಾಡ್ ನಾಯಕರ ನಾಲ್ಕನೇ ಸಂವಾದವಾಗಿದ್ದು ಇದರಲ್ಲಿ ಕ್ವಾಡ್ ನಾಯಕರು ಕ್ವಾಡ್ ಉಪಕ್ರಮಗಳು ಮತ್ತು ಕಾರ್ಯ ಗುಂಪುಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಹೊಸ ಕ್ಷೇತ್ರಗಳಲ್ಲಿ ಸಹಕಾರ, ಭವಿಷ್ಯದ ಸಹಯೋಗಕ್ಕಾಗಿ ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆ ಕ್ವಾಡ್ ನಾಯಕರು ಚರ್ಚಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು.
ಪ್ರಸ್ತುತ ಜಪಾನ್ ಪ್ರಧಾನಿ ಕಿಶಿಂದಾ ಅವರೊಂದಿಗಿನ ಭೇಟಿಯು ಮಾರ್ಚ್ 14ರ ಕಿಶಿಂದಾ ಭಾರತ ಭೇಟಿ ಸಮಯದ ಮಾತುಕತೆಗಳನ್ನು ಮುಂದುವರಿಸಲು ಸಹಾಯಕವಾಗಲಿದೆ ಎನ್ನಲಾಗಿದೆ.